Thursday, December 7, 2017

ಎಂ.ಕೆ.ಇಂದಿರಾ ಮತ್ತು ವಾಣಿ

ಅಷ್ಟ ದಿಗ್ಗಜರು ಎಂಬ ಪುಸ್ತಕವನ್ನು ಭಾಗವತರು ಪ್ರತಿಷ್ಠಾನ ನವೆಂಬರ್ ೨೦೧೭ರಲ್ಲಿ ಪ್ರಕಟಿಸಿದರು. ಈ ಪುಸ್ತಕವು ಈ ವರ್ಷಕ್ಕೆ ನೂರು ತುಂಬಿದ ನಮ್ಮ ಎಂಟು ಹಿರಿಯ ಸಾಹಿತಿ, ಕಲಾವಿದರ ಕುರಿತಾಗಿ ರಚಿಸಲ್ಪಟ್ಟಿದೆ. ಇದರ ಸಂಪಾದಕರು ಎನ್.ಎಸ್.ಶ್ರೀಧರಮೂರ್ತಿ.
ಈ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ರೇವಣ್ಣ ಅವರು ಮಾತಿನಂತೆ ಈ ದಿಗ್ಗಜರ ಸಾಹಿತ್ಯ, ಪರಿಚಾರಿಕೆ, ಸಾಂಸ್ಕೃತಿಕ ಚಟುವಟಿಕೆಗಳ ಕುರಿತಾದ ಪರಿಚಯಾತ್ಮಕ ವಿಶ್ಲೇಷಣೆಯನ್ನು ಈ ಪುಸ್ತಕ ಒಳಗೊಂಡಿದೆ. ಎಂ.ಗೋಪಾಲಕೃಷ್ಣ ಅಡಿಗ, ಟಿ.ಸುನಂದಮ್ಮ, ಎಂ.ಕೆ.ಇಂದಿರಾ, ವಾಣಿ, ದೇಜಗೌ, ಜಿ.ವಿ.ಅಯ್ಯರ್, ಬಿ.ಎಸ್.ರಂಗಾ, ಬಿ.ಚಂದ್ರಶೇಖರ್ ಇವರುಗಳ ಕುರಿತಾದ ಲೇಖನಮಾಲಿಕೆಗಳಿವೆ. ಈ ಪುಸ್ತಕದಲ್ಲಿ ವಾಣಿಯವರ ಸಾಹಿತ್ಯಲೋಕಕ್ಕೆ ನನ್ನ ಲೇಖನಗಳನ್ನು ಬರೆದಿದ್ದೇನೆ. ಗೆಳತಿ ಮಾಲಿನಿ ಎಂ.ಕೆ.ಇಂದಿರಾ ಅವರ ಕಾದಂಬರೀ ಲೋಕಕ್ಕೆ ಒಂದು ಒಳನೋಟದ ಲೇಖನ ಬರೆದಿದ್ದಾರೆ.
ವಾಣಿ ಮತ್ತು ಇಂದಿರಾ ಇಬ್ಬರ ಕುರಿತಾಗಿಯೂ ಈ ಪುಸ್ತಕ ಬಿಡುಗಡೆಯ ದಿನ ನಾನು ನನ್ನ ಸೀಮಿತ ಓದಿನ ಪರಿಧಿಯಲ್ಲಿ ಈ ಪುಸ್ತಕದಲ್ಲಿರುವ ಇಬ್ಬರು ದಿಗ್ಗಜರಾದ ಎಂ.ಕೆ.ಇಂದಿರಾ ಮತ್ತು ವಾಣಿಯವರ ಕಥೆಗಾರಿಕೆ ಮತ್ತು ಕೃತಿಗಳ ಬಗ್ಗೆ ಮಾತನಾಡಿದೆ. ಅದರ ಸಾರಾಂಶವನ್ನು ಇಲ್ಲಿ ಕೊಡುತ್ತಿದ್ದೇನೆ.
ಮೊದಲಿಗೆ ಎ.ಕೆ.ರಾಮಾನುಜಮ್ ಅವರು ಬರೆದ ಒಂದು ಪುಟ್ಟ ಪದ್ಯವನ್ನು ನೋಡೋಣ.

      ಕಣ್ಣೆದುರಿಗೆ ಪ್ರತ್ಯಕ್ಷ
      ವಾದದ್ದನ್ನ
     ನೋಡು
     ವುದಕ್ಕೆ ಎರಡು ಕಣ್ಣು
     ಸಾಲದು ಸ್ವಾಮೀ
     ಅದೃಷ್ಟ
     ಬೇಕು.

              -(ಎ.ಕೆ.ಆರ್)
ಅವರು ಯಾವ ಸಂದರ್ಭದಲ್ಲಿ ಈ ಕವಿತೆ ಬರೆದರು ಎಂಬ ವಿಶೇಷಮಾಹಿತಿ ನನಗೆ ಗೊತ್ತಿಲ್ಲ. ಆದರೆ ನಮ್ಮ ಎಂ.ಕೆ. ಇಂದಿರಾ ಮತ್ತು ವಾಣಿ ಅಥವಾ ಸುಬ್ಬಮ್ಮನವರು ಈ ಅದೃಷ್ಟವನ್ನು ಯಥೇಚ್ಛ ಪಡೆದಿದ್ದರು ಎಂಬುದನ್ನು ಅವರ ಯಾವ ಪುಸ್ತಕವನ್ನೇ ಓದಿದವರೂ ಒಪ್ಪಲೇ ಬೇಕು. ಇಬ್ಬರ ಕೃತಿಗಳಲ್ಲೂ ನಮ್ಮ ಸುತ್ತಲ ಪರಿಸರ, ನಡವಳಿಕೆ, ನಡೆ ನುಡಿ, ಆಚಾರ ವಿಚಾರ ಮತ್ತು ಸಮುದಾಯದಿಂದಲೇ ಕಟ್ಟಿದ ಹಲವಾರು ಕಥೆಗಳು ಪಡಿಮೂಡಿವೆ. ಅವರ ಕಥೆ ಕಟ್ಟೋಣದ ಅಂದ ಚಂದಕ್ಕೆ ಹೋಲಿಕೆಗಳ ಅವಶ್ಯಕತೆಯೇ ಇಲ್ಲ. ನಮಗನ್ನಿಸಿದ್ದನ್ನು ಥಟ್ ಅಂತ ಚಿತ್ರಸಮೇತ ಬರೆದು ಮುಖಪುಸ್ತಕಕ್ಕೆ ವಾಟ್ಸಪ್ಪಿಗೆ ಹಾಕುವ ನೆಟ್ ಯುಗ ಇದು. ನಮ್ಮ ಅನಿಸಿಕೆಗಳಲ್ಲಿ ಅಭಿವ್ಯಕ್ತಿಗಳಲ್ಲಿ ಮಿತಿಗಳನ್ನು ಗುರುತಿಸಿ ಮೀರುವ ಪ್ರಕ್ರಿಯೆ ಆರಂಭವಾಗಿ ದಶಕಗಳೇ ಕಳೆದಿವೆ. ಆದರೆ ೫೦ ವರ್ಷಗಳ ಹಿಂದೆ ಕಾಲ ಹೀಗಿರಲಿಲ್ಲ. ಬರೆಯುವ ಹೆಂಗಸು ಎಂಬುದೇ ಅಪರೂಪವಾಗಿದ್ದ ಕನ್ನಡ ಸಾಹಿತ್ಯ ಸಮುದಾಯದಲ್ಲಿ ನಾಲ್ಕೆಂಟು ಜನ ಪ್ರಭಾವಶಾಲಿ ಬರಹಗಾರ್ತಿಯರು ಆಗಿಬಂದದ್ದು ನಮ್ಮ ನೆಲದ ಸತ್ವವನ್ನು, ನಮಗಿದ್ದ ಸಾಕಷ್ಟು ಮಿತಿಗಳ ನಡುವೆಯೂ ಅದುಮಿಡದೆ ಪುಟಿದ ಪ್ರತಿಭಾಸ್ರೋತವನ್ನು ತೋರಿಸುತ್ತದೆ. ಮತ್ತು ಇದು ವಿಶಿಷ್ಟ ಕೂಡ. ಅವರಲ್ಲಿ ವಾಣಿ, ಇಂದಿರಾ, ತ್ರಿವೇಣಿಯರು ಮೂರು ಘನಸತ್ವಗಳಾಗಿ ಕನ್ನಡದ ಓದುಪ್ರೀತಿಯ ಮನಗಳನ್ನ ಗೆದ್ದರು. ಮೂವರೂ ವಿಭಿನ್ನ ನಿರೂಪಣೆಗಳಲ್ಲಿ ತಮ್ಮ ಸುತ್ತಲಿನ ಘಟನೆಗಳನ್ನು ಕಥೆಯಾಗಿಸಿ ಮನಮುಟ್ಟುವ ಹಾಗೆ ಬರೆದರು.
ವಾಣಿ ಸಣ್ಣಗೆ ಹರಿವ ಹೊಳೆಗುಂಟ ಇರುವ ಹಾದಿ ಬದಿಯಲಿ ಸಾಗಿದ ಪಥಿಕನ ಪಯಣವಾದರೆ
ಇಂದಿರಾ ಮಲೆನಾಡಿನ ಗುಡ್ಡಕಣಿವೆಯಲಿ ಭೋರ್ಗರೆದು ಸುರಿವ ಪಾತಗಳ ಅಬ್ಬಿಗಳ ಚಾರಣದ ಪಯಣ
ತ್ರಿವೇಣಿ ಬಿಸಿನೀರಿನ ಬುಗ್ಗೆಗಳ ಬಾವಿಗಳ ಅಚ್ಚರಿಗಳ ಮೊಗೆಮೊಗೆದು ಕೊಟ್ಟ ಮಾನಸ ಪಯಣ
ಹೀಗೆ ಈ ಮೂವರೂ ನಮ್ಮ ಕನ್ನಡದ ವಿಶಾಲ ಸಮುದಾಯಗಳಲ್ಲಿ ಇರುವ ಹೆಣ್ಣಿನ ಮನೋಲೋಕವನ್ನು ತಮತಮಗೆ ಹಿಡಿಸಿದ ವಿಧಾನಗಳಲ್ಲಿ ಸಮರ್ಥವಾಗಿ ಮೂಡಿಸಿದ್ದಾರೆ. ವಿಚಾರಗಳನ್ನು ಹೇಳುವ ಒಣಹಾದಿಯನ್ನು ಹಿಡಿಯದ ಈ ಮೂವರೂ ತಮ್ಮ ಸೃಜನಾತ್ಮಕ ಪ್ರತಿಭೆಯನ್ನು ಚೆನ್ನಾಗಿ ಬಳಸಿ ಪುಸ್ತಕ ಹಿಡಿದವರು ಕೆಳಗಿಡದ ಹಾಗೆ ಓದಿಸುತ್ತ... ಹೌದಲ್ಲವೆ, ಹೀಗಲ್ಲವೆ, ಏಕೆ ಹೀಗೆ ಎಂಬ ವಿಚಾರದ ಕಲ್ಲುಗಳನ್ನು ಓದಿದವರ ಮನಃಪಟಲದಲ್ಲಿ ಮೂಡಿಸಿದವರು.
ಈಗ ಮೊದಲು ವಾಣಿಯವರ ಲೇಖಲೋಕದಲ್ಲೊಂದು ಇಣುಕು ಹಾಕುವಾ.
೧೯೧೨ರಲ್ಲಿ ಶ್ರೀರಂಗಪಟ್ಟಣದಲ್ಲಿ ಸಿರಿವಂತ ವಕೀಲರಾದ ನರಸಿಂಗರಾಯರ ಮಗಳಾಗಿ ಹುಟ್ಟಿದ ಸುಬ್ಬಮ್ಮ ಎಂಬ ಪುಟ್ಟ ಹುಡುಗಿ ಮುಂದೆ ಸ್ಪಷ್ಟ ನಿಲುವಿನ ಕಥೆಗಾರ್ತಿ ವಾಣಿಯಾಗಿ ರೂಪುಗೊಂಡರು.
೧೯೮೮ರಲ್ಲಿ ವಾಣಿಯವರ ದೇಹಾಂತ್ಯವಾಯಿತು. ಅವರು ಕಡೆದಿಟ್ಟ ಈ ಕಥಾಶಿಲ್ಪಗಳಿಂದ ಶತಮಾನಗಳ ನಂತರವೂ ಓದಿದವರ ಮನದಲ್ಲಿ ಇಂದಿಗೂ ಜೀವಂತವಾಗಿರುವರು. ಕನ್ನಡದ ಸಾಹಿತ್ಯಲೋಕದಲ್ಲಿ ಓದುಗರ ಮಾನಸದಲ್ಲಿ ಇವರು ಆತ್ಮೀಯವಾಗಿ ನೆಲೆನಿಂತ ಲೇಖಕಿ.
ಮೊದಲು ಲೇಖಕಿಯಾಗಿ ಅವರ ವಿಶಿಷ್ಟತೆಯ ಬಗ್ಗೆ ನೋಡೋಣ. ಅವರ ಬರವಣಿಗೆಯ ಕಾಲ ೫೦ರ ದಶಕದ ಕೊನೆಯಿಂದ ೮೦ರ ದಶಕದ ಮೊದಲಾರ್ಧದವರೆಗೂ. ಇದು ಭಾರತೀಯ ಜನಜೀವನದಲ್ಲಿಯೂ ಸ್ಥಿತ್ಯಂತರದ ಕಾಲವೇ. ಸಣ್ಣಕಥೆಗಳಿಂದ ಮೊದಲ್ಗೊಂಡು ಕಾದಂಬರಿಗಳನ್ನು ಅವರು ಬರೆದರು. ಆ ಕಾಲದಲ್ಲಿ ಪತ್ರಿಕೆಗೆ ಅವರು ಬರೆದ ಕೆಲವು ಲಲಿತ ಪ್ರಬಂಧಗಳು ಹರಟೆ ಎಂಬುದಾಗಿ ಪ್ರಕಟವಾಗಿದೆ. ವಚನಗಳನ್ನೂ ಇವರು ಬರೆದಿರುವರಾದರೂ ನನಗೆ ಇದು ಓದಲು ಸಿಗಲಿಲ್ಲ. ಇಷ್ಟು ವಿಶಾಲ ಸಮಯಾವಕಾಶದಲ್ಲಿ ಅವರು ಸುತ್ತಲಿನ ಸಮಾಜ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದನ್ನು ತಮ್ಮ ಸುಲಲಿತ ಮತ್ತು ಓದಲೇಬೇಕಿನ್ನಿಸುವ ನಿರೂಪಣೆಯಲ್ಲಿ ಸಮರ್ಥವಾಗಿ ಓದುಗರಿಗೆ ದಾಟಿಸಿದ್ದಾರೆ. ನಾನು ಕೇಳ್ಪಟ್ಟ ಹಾಗೆ ಇವರ ಪುಸ್ತಕಗಳು ಆ ಕಾಲದ ಜನಪ್ರಿಯ ಪ್ರಕಟಣೆಯಾಗಿದ್ದವು. ಮೂರು ನಾಲ್ಕು ಚಲನಚಿತ್ರಗಳು ಇವರ ಕಾದಂಬರಿಯನ್ನು ಆಧರಿಸಿ ತಯಾರಾಗಿ ನೋಡುಗರಿಗೂ ಮನಮೆಚ್ಚಾದವು.
ಇದು ಯಾವುದೇ ಒಬ್ಬ ತಕ್ಕ ಮಟ್ಟಿಗಿನ ಲೇಖಕಿಯ ಜನಪ್ರಿಯತೆ ಮತ್ತು ಸಾಧನೆ ಎನ್ನಬಹುದೇನೋ. ವಾಣಿಯವರು ಇದನ್ನು ಒಂದು ಸ್ತರ ಮೇಲಕ್ಕೆ ಕೊಂಡು ಹೋಗುತ್ತಾರೆ. ಅದನ್ನು ನಾನು ಹೀಗೆ ಗುರುತಿಸುತ್ತೇನೆ.
  • ಅವರ ಕಥೆಗಳಲ್ಲಿ ನಮ್ಮ ಸುತ್ತಲಿನ ಸಮಾಜದ ಚಿತ್ರಣವೇ ಇದ್ದರೂ, ಆಗಿನ ನಡವಳಿಕೆ ರೂಢಿಗಳೇ ಕಥೆಯಲ್ಲಿ ಬಂದರೂ... ಹೊಸತಕ್ಕೆ ತುಡಿಯುವ ಮನಸ್ಸು, ವಿಚಾರಶೀಲತೆ, ಮತ್ತು ಅಂತಃಕರಣಗಳು ಇವರ ಕಥೆಗಳ ಜೀವಾಳ. ರಮ್ಯ ಮಾಯಾವಾಸ್ತವದ ಕಥಾನಕಗಳಲ್ಲ ಇವು. ಬದಲಾಗಿ ಮಹಿಳೆಯರ, ಕುಟುಂಬದ ಒಳತೋಟಿಗಳು ಈ ಕಥೆಗಳಲ್ಲಿವೆ. ಅಸಹಾಯ ಸ್ಥಿತಿಯ ಚಿತ್ರಣ ಕೊಡುತ್ತಲೇ ಅದರಿಂದ ಹೊರಬರುವ ದಾರಿಯ ಬಾಗಿಲುಗಳ ಕಡೆಗೆ ಕೈಮರ ಇಟ್ಟಿದಾರೆ. ಕೆಟ್ಟ ನಡವಳಿಕೆಯ ವ್ಯಕ್ತಿಯೊಬ್ಬನು ಅಥವಾ ಒಬ್ಬಳು ಏಕೆ ಹಾಗಿರಬಹುದು ಎಂಬ ಸೂಕ್ಷ್ಮ ಚಿತ್ರಣಗಳಿಲ್ಲಿವೆ. ಯಾರನ್ನೂ ವೈಭವೀಕರಿಸದ ನೈಜ ಪಾತ್ರಚಿತ್ರಣಗಳು ಇವರ ಕಾದಂಬರಿಗಳ ಮತ್ತು ಕಥೆಗಳ ಸತ್ವ. ಒಳಿತು-ಕೆಡುಕುಗಳ ನಡುವಿನ ತೆಳು ಗೆರೆಯನ್ನು ಸೂಚ್ಯವಾಗಿ ಕಾಣಿಸುವ ಈ ಕಥನಗಳಲ್ಲಿ ಓದುಗರ ಭಾವಕ್ಕೆ ಅದನ್ನು ಬಿಡುವ ತೆರೆದ ಭಾವವಿದೆ. ಒಳ್ಳೆಯ ಸ್ವಭಾವದವರಿಗೆ ಮತ್ತು ಧರ್ಮಭೀರುಗಳಿಗೆ ಒಳ್ಳೆಯದೇ ಆಗುವುದು, ಕೆಡುಕಾಗಿ ನಡೆದುಕೊಳ್ಳುವವರು ಮಣ್ಣು ಮುಕ್ಕುವರು ಎಂಬ ಕಪ್ಪು-ಬಿಳುಪು ಸ್ಟೀರಿಯೋಟೈಪ್ ಇವರ ನಿರೂಪಣೆಯಲ್ಲಿಲ್ಲ. ಮೃದು ಮನಸ್ಸಿನವರ ಬದುಕಿನ ಗತಿ, ಎದುರು ಬೀಳಲಾಗದ ಅಸಹಾಯತೆ, ಕಷ್ಟವನ್ನು ಸಹಿಸುವ ಗಟ್ಟಿತನ ... ಇವು ಪದೇ ಪದೇ ಬೇರೆ ಬೇರೆ ರೀತಿಗಳಲ್ಲಿ ನಿರೂಪಿಸಲ್ಪಟ್ಟಿವೆ. ಹಾಗೆಯೇ ಧಾಡಸೀ ಮನೋವೃತ್ತಿಯವರ ಏಳುಬೀಳಿನ ಹಾದಿ, ಉತ್ಸಾಹ, ಮುನ್ನುಗ್ಗುವಿಕೆ, ವಿವೇಚನಾರಾಹಿತ್ಯದಿಂದ ಎದುರಿಸಬೇಕಾದ ವಿರುದ್ಧ ಪರಿಸ್ಥಿತಿ...ಇವೂ ಸಹ. ಹಾಗಂತ ಈ ಸ್ವಭಾವಗಳು ಒಬ್ಬರಲ್ಲಿಯೇ ನೆಲೆಸಿ ದೇವತೆ-ರಾಕ್ಷಸ ಪಾತ್ರ ಸೃಷ್ಟಿಯಿಲ್ಲ. ಎಲ್ಲರಿಗೂ ಇದ್ದಿರಬಹುದಾದ ಮಿತಿ ಮತ್ತು ಸಾಮರ್ಥ್ಯಗಳ ಹದವಾದ ಮಿಶ್ರಣದ ಸಮಾಧಾನ ನಿರೂಪಣೆಯಲ್ಲಿ ಇವು ಮನಗೆಲ್ಲುತ್ತವೆ.
  • ತನ್ನ ಪಾತ್ರವಿದು ಎಂದು ಅರಿವಿದ್ದು ಹರಿಯುವ ತುಂಬು ಹೊಳೆಗೂ ಬೇರೆ ಬೇರೆ ಜಾಗದಲ್ಲಿ ಆಳ ಮತ್ತು ಸುಳಿಗಳಿರುತ್ತವೆ. ಅದರ ಹರಿವನ್ನು ನೆನಪಿಸುವ ಕಾದಂಬರಿಗಳು ವಾಣಿಯವರದು ಎನಿಸಿತು ನನಗೆ ಈ ಪುಸ್ತಕಗಳನ್ನೋದಿ. ಇವತ್ತಿನ ನಮ್ಮ ಮನಸ್ಥಿತಿಗೆ ಇವರ ಕಥೆಗಳ ಸಾವಧಾನದಲ್ಲಿ ಒಂದು ಚಿಕಿತ್ಸೆಯಿದೆ ಅನ್ನಿಸಿತು. ಇದು ಬಹುಶಃ ಆಗಿನ ಕಾಲದ ಎಲ್ಲ ವಿಚಾರಶೀಲ ಬರಹಗಳಲ್ಲಿ ನಾವು ನೋಡಬಹುದೇ ಆದರೂ ಇವರ ಕಥೆಗಳಲ್ಲಿರುವ ಒಳನೋಟ ಹಿತವಾಗಿ ನಿಮ್ಮ ಮನಸ್ಸನ್ನು ಮುಟ್ಟುತ್ತದೆ. ಅರಳಿಸುತ್ತದೆ. ಹೂವೊಂದನ್ನು ಅದರ ತೊಟ್ಟು, ಎಲೆ, ಹೊತ್ತ ಗೆಲ್ಲಿ, ಪೂರ್ಣ ಗಿಡ/ಪೊದೆ/ಮರ ಮತ್ತು ಅದು ನಿಂತ ಆವರಣದ ಸಮೇತ ನೋಡುವ ಆಲ್ ಇನ್-ಕ್ಲೂಸಿವ್ ಚಿತ್ರಣ ಮತ್ತು ಹೂವಿನ ಆಸ್ವಾದನೆಯನ್ನು ನೋಟ, ಪರಿಮಳದಲ್ಲಿಯೇ ಮಾಡಿಸುತ್ತ ಸ್ಪರ್ಶದ ಅನುಭವವನ್ನೇ ಕಟ್ಟಿಕೊಡುವ ಅಪರೂಪದ ಹೂ-ವಿಧಾನ ಈ ಕಥೆಗಾರ್ತಿಯದ್ದು.
  • ನಮ್ಮ ಇಂದಿನ ನಾಗಾಲೋಟದ ಬದುಕಿನಲ್ಲಿ ಸಂಪೂರ್ಣವಾಗಿ ಪುರಾತನವಾಗಿರುವ ಸಾವಧಾನ ಈ ಕಥೆಗಳ ತಿರುಳು. ಆ ಪಲ್ಸ್ ಅನ್ನು ಒಂದು ಸಲ ಅನುಭವಿಸಲು, ಆ ಕಥೆಗಳಲ್ಲಿ ಚಿತ್ರಿತವಾಗಿರುವ ಕಾಲದೊಳಗೆ ಹೊಗಲು ವಾಣಿಯವರ ಕಾದಂಬರಿಯ ಓದು ಅವಶ್ಯವಿದೆ. ಹಳೆಯದಕ್ಕೆ ಮರಳುವ ಮಾತಲ್ಲ ಇದು. ಹಳತಿನ ಪರಿಚಯ, ಆ ಹರಿವಿನ ಅನುಭವ ಇವತ್ತು ನಾವು ಬಿದ್ದಿರುವ ಈಜಿಗೆ ಹೊಸ ಕಸುವನ್ನು ತುಂಬಬಲ್ಲದು ಎನ್ನುವುದು ನನ್ನಭಿಪ್ರಾಯ.
ಎಂ.ಕೆ.ಇಂದಿರಾ
ವಾಣಿಯವರಿಗೆ ಹೋಲಿಸಿದರೆ, ಎಂ.ಕೆ.ಇಂದಿರಾ ಅವರ ಹೆಸರು ಈಗಿನ ಜನರಿಗೆ ಹೆಚ್ಚು ಪರಿಚಿತವೇ. ಇವರ ಬಗ್ಗೆ ಆಗೀಗ ಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ಒಂದೊಂದು ಪುಟ್ಟ ಲೇಖನಗಳು ಬರುತ್ತಿರುತ್ತವೆ. ಇತ್ತೀಚಿನ ಓದುಗರ ವಲಯದಲ್ಲಿ ಅವರ ಒಂದಾದರೂ ಕಾದಂಬರಿಗಳನ್ನು ಓದಿದವರು ಇರುತ್ತಾರೆ. ಸಿನಿಮಾಗಳಾದ ಅವರ ಫಣಿಯಮ್ಮ ಮತ್ತು ಗೆಜ್ಜೆ ಪೂಜೆ ಕೃತಿಗಳು ಸಾಕಷ್ಟು ಜನಕ್ಕೆ ಓದದೆಯು ಗೊತ್ತಿವೆ. ಈ ನಿಟ್ಟಿನಲ್ಲಿ ನೋಡಿದರೆ ಇಂದಿರಾ ನಾನು ಆಗಲೆ ಹೇಳಿದ ಹಾಗೆ ಮಲೆನಾಡಿನ ಗುಡ್ಡ ಕಣಿವೆಗಳಲ್ಲಿ ಅಡಗಿ ಕುಳಿತ ಭೋರ್ಗರೆವ ಜಲಪಾತಗಳನ್ನು ಪರಿಚಯಿಸುವ ಚಾರಣದ ಹಾದಿಯನ್ನು ಕಥೆಗಾರಿಕೆಗೆ ತೋರಿದ್ದಾರೆ.
ಇವರ ಕಥೆಗಾರಿಕೆಯ ಬಗ್ಗೆ ಸೂಕ್ಷ್ಮವಾಗಿ ಆದರೂ ದೃಢವಾಗಿ ದಾಖಲಿಸಿರುವ ಕ್ರಾಂತಿಕಾರಕ ವಿಚಾರಗಳ ಬಗ್ಗೆ ನನ್ನ ಸ್ನೇಹಿತೆ ಮಾಲಿನಿ ಉದಾಹರಣ ಸಹಿತವಾಗಿ ಒಳ್ಳೆಯ ಪರಿಚಯ ಮಾಡಿದ್ದಾರೆ. ಅಸಾಮಾನ್ಯ ಸಾಧ್ವಿಯನ್ನಾಗಿ ತೋರಿದ ಒಬ್ಬ ಬಾಲವಿಧವೆಯ ಕಥೆಯ ಮೂಲಕ ಫಣಿಯಮ್ಮದಲ್ಲಿ ಅವರು ಚರ್ಚಿಸಿರುವ ವಿಚಾರಗಳನ್ನು ಇವತ್ತು ಯಾರಾದರೂ ಬರೆದಿದ್ದರೆ ಬ್ಯಾನಾಗಿಬಿಡುತ್ತಿತ್ತು. ಇಂದಿರಾ ಅವತ್ತಿನ ಓದುಗರ ಮಾರ್ಕೆಟ್ಟನ್ನು ಕದಡಲಿಲ್ಲ. ಆದರೆ ಓದಿದವರೆಲ್ಲರ ಮನದಲ್ಲಿ ಹಳೆಯ ಶತಶತಮಾನಗಳ ಕಮಟು ವಿಚಾರದ ಹಳಸಲು ವಾಸನೆ ಮತ್ತು ಅವುಗಳ ದುರುಪಯೋಗಗಳ ಬಗ್ಗೆ ಹಸಿಗೋಡೆಯಲ್ಲಿ ಹರಳು ನಾಟಿದಂತೆ ಬರೆದರು. ಫಣಿಯಮ್ಮ ಈ ಕಥೆಯ ಕ್ರಾಂತಿಕಾರಿಯಲ್ಲ. ಬದಲಾಗಿ ಹಳೆಯ ರಿವಾಜನ್ನ ಕಮಕ್ಕಿಮ್ಮಕ್ಕನ್ನದೆ ಒಪ್ಪಿ ಅದರೊಳಗೇ ಮಿಳಿತವಾದವಳು. ಆದರೆ ತನ್ನ ದೆಸೆ ಇನ್ನೊಬ್ಬರಿಗೆ ಒದಗುವಾಗ ಮಿಡಿಯುವಳು. ಅವಳ ರೂಢಿಗತ ಜೀವನಶೈಲಿ ಅವಳಿಗೆ ಸಂಪ್ರದಾಯವನ್ನು ಪ್ರಶ್ನಿಸುವ ಧೈರ್ಯವನ್ನು ಅವಳ ಪ್ರಶ್ನೆಗಳನ್ನು ಸುತ್ತಲಿನವರು ಹೌದಲ್ಲ ಎಂದು ಒಪ್ಪಬಹುದಾದ ಸನ್ನಿವೇಶಗಳಿಗೆ ಎಡೆಮಾಡುತ್ತದೆ ಅದೇ ಫಣಿಯಮ್ಮ ಕ್ರಾಂತಿಕಾರಕ ವಿಧವೆಯಾಗಿ ಎಲ್ಲರ ವಿರುದ್ಧ ಕತ್ತಿ ಮಸೆದಿದ್ದರೆ ಫ್ಲಾಪ್ ಆಗಿಬಿಡುತ್ತಿದ್ದಳು. ಈ ಸೂಕ್ಷ್ಮ ಬ್ಯಾಲನ್ಸನ್ನು ಇಂದಿರಾ ಅವರ ಕಥನಶಕ್ತಿ ಸೃಜನಶೀಲತೆ ಮತ್ತು ಯಾವುದನ್ನು ಯಾವ ದಾರಿಯಲ್ಲಿ ಹೊಗಿಸಬೇಕು ಎಂಬ ಬುದ್ಧಿವಂತಿಕೆ ಮಾಡಿದೆ. ಫಣಿಯಮ್ಮ ಕೃತಿಯ ಸಾರ್ಥಕತೆ ಅದನ್ನು ಓದಿದವರ ಬದಲಾದ ಮನೋಭಾವದಲ್ಲಡಗಿದೆ. ಅವರ ಕಥೆಗಾರಿಕೆಯ ಬಗ್ಗೆ ಪುಸ್ತಕದಲ್ಲಿ ಸ್ವಲ್ಪ ವಿವರವಾಗಿಯೇ ಬರೆಯಲಾಗಿದೆ. ಓದಿರಿ.
ವಾಣಿ ಮೆತ್ತನೆ ದನಿಪೂರ್ಣ ವಿಚಾರಗಳನ್ನು ನಮ್ಮ ಸುತ್ತಲೆ ಇರುವ ಸಾಧಾರಣ ಸಂಗತಿಗಳಲ್ಲಿಯೇ ಅಡಗಿರುವ ವಿಷಯಗಳ ಮೂಲಕ ಕಥನಕ್ಕೆ ತಂದರೆ, ಓದಿದವರು ಆಹ್..ಹೀಗೂ ಇರಬಹುದೆ ಎಂಬಂಥ ಕಂಡು ಕೇಳಿರದಂಥ ವಿಷಯಗಳನ್ನ ಇಂದಿರಾ ಕಥನಕ್ಕೆ ತಂದರು. ಇಬ್ಬರೂ ಉಪಯೋಗಿಸುವ ಭಾಷಾವಿಧಾನವೇ ಬೇರೆ. ನವಿರು ಮೆಲುಮಾತುಗಳು ವಾಣಿಯದಾದರೆ, ಚುಟುಕು,ಕುಟುಕು ಮತ್ತು ನಗೆಚಾಟಿಕೆಯ ಮಾತುಗಳು ಇಂದಿರಾ ಅವರವು. ಇಬ್ಬರೂ ಓದುಗರ ಮನಸೆಳೆವ ಹಾಗೆಯೇ ಬರೆದವರು. ವಾಣಿ ಹೂಬಿಡಿಸಿ ಕಟ್ಟುವ ಹುಡುಗಿಯಾದರೆ, ಇಂದಿರಾ ಮರಹತ್ತಿ ಹಣ್ಣು ಕೆಡಹುವ ಚತುರೆ. ಇವೆಲ್ಲದರ ಮೀರಿ ಇಬ್ಬರ ಮನದಿಂಗಿತವೂ ಒಂದೆ. ಹೆಣ್ಣಿನ ಮನೋಲೋಕಕ್ಕೆ ಪುಟ್ಟ ಪುಟ್ಟ ಇಣುಕುಗನ್ನಡಿ ತೋರಿ ಅವರ ಅನನ್ಯತೆಯನ್ನು ಸಾಮಾನ್ಯತೆಯನ್ನು ಮತ್ತು ಸಮಾನ ಮನಸ್ಕತೆಯನ್ನು ಓದುಗರ ಮನಸ್ಸಿನಲ್ಲಿ ನೆಲೆನಿಲ್ಲಿಸುವುದು. ಅವರವರದೇ ರೀತಿಯಲ್ಲಿ ಇಬ್ಬರೂ ಸಮರ್ಥವಾಗಿ ಮಾಡಿದ್ದಾರೆ ಅಂತಲೆ ಅನಿಸುತ್ತದೆ ನನಗೆ ಅವರ ಕೃತಿಗಳನ್ನು ಓದಿ.
ಇವತ್ತಿಗೂ ಎಲ್ಲ ಸಮಾನ ಅನುಕೂಲ-ಸಮಾನ ಅವಕಾಶ ಇತ್ಯಾದಿ ಮೇಲ್ಪದರದ ಹೊದಿಕೆಯ ದೊಡ್ಡ ಮಾತುಗಳ ದಿನಮಾನಗಳಲ್ಲಿ ಕೂಡಾ ಬರೆಯುವ ಹೆಣ್ಣು ಎಲ್ಲರ ಮಗ್ಗಲುಮುಳ್ಳೇ. ಮನೆಯ ಒಳಗೆ ಎಲ್ಲ ಜವಾಬ್ದಾರಿಗಳನ್ನ ನಿರ್ವಹಿಸಿ ನಂತರ ತನ್ನ ಲೋಕಕ್ಕೆ ಅಡಿಯಿಡಬಹುದು. ಒಂದು ಕೆಲಸ ಹೆಚ್ಚುಕಮ್ಮಿ ಆದರೆ ಅವಳು ಬಿಡಿ ಮನೆ ಸಂಸಾರ ಎಲ್ಲ ಬದಿಗಿಡುವ ಜಾತಿ.. ಓದಿದ, ಬರೆಯುವ ಹೆಂಗಸರ ಸಹವಾಸ ಕಷ್ಟ ಎನ್ನಲಾಗುವುದು.
ಹೊರಗೆ ಹಾರ ಕಿರೀಟ ತುರಾಯಿ ಪಲ್ಲಕ್ಕಿಗಳಲ್ಲಿ ರಾಜಮಾರ್ಗದಲ್ಲಿ ಎದೆಯುಬ್ಬಿಸಿ ಸಾಗುವ ಗಂಡು ಸಾಹಿತಿಗಳ ಮುಂದೆ ಹೆಚ್ಚುಗಾರಿಕೆ ತೋರದ ಹಾಗೆ ತನ್ನ ದಾರಿ ಎಷ್ಟೋ ಅಷ್ಟೆ ನಡೆಯಬಹುದು. ಒಂದು ಹೆಜ್ಜೆ ಹೆಚ್ಚೂ ಕಮ್ಮಿ ಆದರೆ ನಿಮ್ಮದೇನು ಬಿಡಿ ಅಡಿಗೆಮನೆ ಸಾಹಿತ್ಯ ಎನ್ನುವರು. ಈಗೀಗ ಗ್ಲೋಬಲ್ ಆದ ಜನಗಳ ಬಾಯಲ್ಲಿ ಹೊಸ ಪದ ಬಂದಿದೆ. ಚಿಕ್ ಲಿಟ್ರೇಚರು. ಹೆಂಗಸರಲ್ವಾ... ಎಂಬ ಮಾತು ಇದ್ದೇ ಇದೆ. ಹೆಚ್ಚು ಹೆಚ್ಚು ಅಕಾಡೆಮಿಗಳ ಪ್ರಶಸ್ತಿಗಳನ್ನು, ಅನುವಾದಗಳನ್ನೂ, ವಿಶ್ವಸಾಹಿತ್ಯದ ನಾಗಾಲೋಟಗಳನ್ನೂ ಸಮರ್ಥವಾಗಿ ಮಾಡುವ ಮಹಿಳಾ ಸಾಹಿತಿಯರಿಗೆ ಅವರ ಸಾಧನೆಯನ್ನೆಲ್ಲ ಹೆಂಗಸಲ್ವಾ ಏನೋ ಮೋಡಿ ಮಾಡಿ ಗೆದ್ದಳು ಎಂಬ ಒಂದು ಮಾತಿನಲ್ಲಿ ಅಳೆದುಬಿಡುತ್ತಾರೆ.
ಇವತ್ತು ಪರಿಸ್ಥಿತಿ ಹೀಗಿದ್ದರೆ ಈಗ ೫೦-೬೦ ವರ್ಷಗಳ ಹಿಂದೆ ೧೯೬೦ ರ ದಶಕದಲ್ಲಿ ಹೇಗಿದ್ದರಬಹುದು ಎಂದು ಸುಲಭವಾಗಿ ಊಹಿಸಬಹುದು. ಜನಪ್ರಿಯವಾದದ್ದೆಲ್ಲ ಅಥವಾ ವಿಪುಲವಾಗಿ ಬರೆದದ್ದೆಲ್ಲ ಶ್ರೇಷ್ಠವಲ್ಲ ಎಂಬ ಪರಂಪರಾಗತವಾದ ನಂಬಿಕೆಯೊಂದು ನಮ್ಮ ಸಾಹಿತ್ಯದ ಬಗ್ಗೆ ಬಾಯೊಡೆದು ಹೇಳದ ಒಂದು ಕಲ್ಪಕ ನಂಬಿಕೆ. ಇದು ನನ್ನದಂತೂ ಅಲ್ಲ. ಆದರೆ ಆ ಕಲ್ಪಿತ ನಂಬುಗೆಯ ಹುಸಿನೊರೆಯಲ್ಲಿ ದಾಖಲೀಕರಣದ ಸಮಯದಲ್ಲಿ ಹಲವು ಜನಪ್ರಿಯ ಬರಹಗಾರರು, ಬರಹಗಾತಿಯರು ಹಿಂದೆ ತಳ್ಳಲ್ಪಟ್ಟರು. ಅವರ ಸಾಹಿತ್ಯದ ಬಗ್ಗೆ, ಮುಖ್ಯವಾಗಿ ಮಹಿಳೆಯರ ಬಗ್ಗೆ ಅಡುಗೆ ಮನೆ ಸಾಹಿತ್ಯ, ಹಿತ್ತಲ ಸಾಹಿತ್ಯ ಇತ್ಯಾದಿಯಾಗಿ ಸದರದ ನಸುನಗೆಯಲ್ಲಿ, ನಗುನಗುತ್ತಲೆ ಚೆನ್ನಾಗಿದೆ ಎಂದು ಹೇಳುತ್ತಲೆ ಸಾಹಿತ್ಯದ ಮುಖ್ಯಭೂಮಿಕೆಯ ಆವರಣದಾಚೆಯಲ್ಲಿ ಅವಜ್ಞೆಯ ಜಾಗವನ್ನು ನೀಡಲಾಯಿತು. ನವೋದಯ, ನವ್ಯ, ನವ್ಯೋತ್ತರ ಗಂಡು ಸಾಹಿತಿಗಳು ವಿಶ್ವಸಾಹಿತ್ಯದಲ್ಲಿ ತಮ್ಮ ಅರಿವಿಗೆ ಅನುಭವಕ್ಕೆ ಬಂದ ಸತ್ಯವನ್ನು ಕಾಸಿ ಸೋಸಿ ಬರಹಕ್ಕಿಳಿಸಿದ್ದಾರೆ. ಹಾಗೆಯೇ ಈ ಕಾಲದಲ್ಲಿ ಬರೆದ ಮಹಿಳೆಯರು ತಮ್ಮ ಅರಿವಿಗೆ, ಅನುಭವಕ್ಕೆ ಬಂದ ಸತ್ಯವನ್ನು ಕಾಸಿ, ಸೋಸಿ, ಪಾಕಮಾಡಿ ಬರಹಕ್ಕಿಳಿಸಿದ್ದಾರೆ. ಅವರು ಅಂಗಳದಲ್ಲಿ, ಬಸ್ ಸ್ಟಾಂಡಿನಲ್ಲಿ, ಗೆಳತಿಯರಲ್ಲಿ, ಸಂತತನದಲ್ಲಿ,ಆಫೀಸಿನಲ್ಲಿ, ರೈಲ್ವೆ ಸವಾರಿಯಲ್ಲಿ, ಹೈವೆಯಲ್ಲಿ, ಹಳ್ಳಿ ಉತ್ಖನನದಲ್ಲಿ, ಸರ್ಕಲ್ ಪಕ್ಕದ ಕಾಫಿ ಹೌಸಿನಲ್ಲಿ ಅನುಭವಕ್ಕೆ ಪಕ್ಕಾಗಿರಬಹುದು. ಆದರೆ ನಮ್ಮ ಮಹಿಳೆಯರ ಲೋಕವೇನು ಸಣ್ಣದಲ್ಲ. ಮನೆ, ಅಂಗಳ, ಕಾಲೇಜು, ಅಡಿಗೆಮನೆ, ಆಫೀಸು-ಮನೆ ಮಧ್ಯದ ತಂತಿನಡಿಗೆ ಬ್ಯಾಲನ್ಸು, ಮಕ್ಕಳು-ಗಂಡನ ನಿಭಾವಣೆ ಮಾಡುತ್ತ ಹೊಳೆದ ಅನುಭಾವದಲ್ಲಿ ಪ್ರಾಮಾಣಿಕವಾಗಿ ಉತ್ಕಟವಾಗಿ ಕೆಲವೊಮ್ಮೆ ಮನಸ್ಸಾಕ್ಷಿ ಚುಚ್ಚುವಂತೆ ಬರೆಯುತ್ತ ಬಂದಿದ್ದೇವೆ. ಚಿಕ್ ಚಿಕ್ಕದಾಗಿ ಬರೆಯುತ್ತಲೇ ಇರುತ್ತೇವೆ. ಇದಕ್ಕೆ ವಾಣಿ,ಇಂದಿರಾರೆ ಪ್ರೇರಣೆ ಮತ್ತು ಶಂಕುಸ್ಥಾಪನೆ ಕೂಡ.

ವಾಣಿ, ಇಂದಿರಾರವರ ನೆನಪಿಗೆ ಮತ್ತು ಈಗ ಬರೆಯುತ್ತಿರುವ ನನ್ನ ಎಲ್ಲ ಸಹಲೇಖಕಿಯರ ಆತ್ಮಗೌರವಕ್ಕೆ ಸತ್ವಕ್ಕೆ ಶರಣೆನ್ನುತ್ತಾ ಈ ಲೇಖನವನ್ನು ಮುಗಿಸುತ್ತೇನೆ.



1 comment:

sunaath said...

ವಾಣಿಯವರ ಸಾಹಿತ್ಯವನ್ನು ನಾನು ಅಷ್ಟಾಗಿ ಓದಿಲ್ಲ. ‘ಸದಾನಂದ’ ನಾನು ಮೊದಲು ಓದಿದ ಎಮ್.ಕೆ.ಇಂದಿರಾರವರ ಕಾದಂಬರಿ. ನೆನಪಿನಲ್ಲಿ ಉಳಿಯುವಂತಹ ಕಾದಂಬರಿ. ಇವರೀರ್ವರ ಸಾಹಿತ್ಯದ ಪರಿವೀಕ್ಷಣೆಯನ್ನು ಚೆನ್ನಾಗಿ ಮಾಡಿದ್ದೀರಿ.