Thursday, April 5, 2007

ಈಗ ಗೊತ್ತಾಗಿದೆ...

ಮಳೆಯಲ್ಲಿ ನೆಂದ ಹಚ್ಚಹಸಿರಲ್ಲಿ

ಮೊಗ್ಗು ಮೂಡಿ,

ಹೂವರಳಿ, ಕಾಯಿ ಜಗ್ಗಿ,

ಹಣ್ಣಾಗಿ, ಎಲೆಗಳುದುರಿ. . . .

ಹಾವಸೆ ಹಿಡಿದ ಜಾರುದಾರಿಯಲ್ಲೀಗ

ನೆಲಕಚ್ಚಿದ ತರಗೆಲೆಗಳ ಮರ್ಮರ;

ದಿಟ್ಟಿ ಹಾಯುವವರೆಗೆ

ಹಸಿರ ತಂಪಿನ, ಕಂಪು ಸೂಸಿದಲ್ಲೀಗ

ನೆಳಲೂ ನೀಡದ

ಬೋಳು ಬೋಳು ಗಿಡಮರ.


ನಿಸರ್ಗವೇ ಹೀಗೆ. . .

ಋತು‌ಋತುವಿಗೆ ಬದಲಾಗಿ,

ಕೊನೆಯಾಗಿ, ಮೊದಲಾಗಿ,

ಕ್ಷಣ ಕಾಯದೆ, ಕ್ಷಣ ನಿಲ್ಲದೆ

ನಿರಂತರ ಪರಿವರ್ತನೆ, ಚಲನೆ.


ಈಗ ಗೊತ್ತಾಗಿದೆ. . .

ನಾನು ನಿನ್ನ ನಿಸರ್ಗಕನ್ಯೆ ಅಂತ

ಕರೆದಿದ್ದು ಸುಳ್ಳಲ್ಲ,

ಉತ್ಪ್ರೇಕ್ಷೆ ಖಂಡಿತಾ ಅಲ್ಲ.


ನನ್ನ ನೋಡಿ ಮಿಂಚಿದ್ದ

ನಿನ್ನ ಕಣ್ಣಲ್ಲೀಗ ಕಪ್ಪು ಮೋಡ,

ಕೊನೆಯಿರದ ಮಳೆಗಾಲ;

ಪ್ರಪಂಚ ಗೆದ್ದ ಭಾವದಲ್ಲಿ

ನನ್ನ ಕೈಗಳನ್ನ ಹಿಡಿದಿದ್ದ

ನಿನ್ನ ಕೈಗಳಲ್ಲೀಗ ಬರಗಾಲ;

ನನ್ನ ಬರುವಿಕೆಯ ತಂಗಾಳಿಗೆ

ತೂಗಿದ್ದ ನಿನ್ನ ಮನದಲ್ಲೀಗ

ಚಂಡಮಾರುತ. . . .


ರುದ್ರ ರಮಣೀಯ ನಿಸರ್ಗದ ರಮ್ಯತೆ,

ಮಾನವಸಹಜ ಕ್ಷುಲ್ಲಕತೆಗೆ

ಬಲಿಬಿದ್ದು

ರೌದ್ರತೆಯಷ್ಟೇ ಉಳಿದಿರುವುದು

ಮಾತ್ರ, ಅನ್ಯಾಯ... :<(

6 comments:

Shree said...

ಅದು ಹೇಗೆ ಪರಕಾಯ ಪ್ರವೇಶ ಮಾಡಿ ಬರೀತೀರೋ ಗೊತ್ತಿಲ್ಲ... ಈ ಕವನದ ನವಿರಾದ ಹಾಸ್ಯ ತು೦ಬ್ ಚೆನ್ನಾಗಿದೆ... ಇ೦ಥ ಆರೋಗ್ಯಕರ ಹಾಸ್ಯ ಇನ್ನೂ ಹೆಚ್ಚು ಬರ್ತಿರಲಿ...

ಭೂಮಿ-ಸಾಗರ said...

ಸಿಂಧು, ನಿಮ್ಮ ಕವನ, ಲೇಖನಗಳು ಬಹಳ ಸೊಗಸಾಗಿವೆ. ಹೀಗೇ ಮುಂದುವರಿಸಿ.

ಸುಪ್ತದೀಪ್ತಿ suptadeepti said...

ಸಿಂಧು, ಬದಲಾದ ಮನೋ-ಸ್ಥಿತಿಗೆ ಪರಿಸರವನ್ನು ಉಪಯೋಗಿಸಿದ ರೀತಿ ಸೊಗಸಾಗಿದೆ. ಬರೆಯುತ್ತಿರಿ.

Anonymous said...

ಸಿಂಧು ಅವರೆ,
ಈ ಕವನ ತುಂಬಾ ಚನ್ನಾಗಿ ಇದೆ. ಸಂಬಂಧಗಳು ಮುರಿಯುತ್ತಿರುವುದನ್ನು, ಬದಲಾಗುತ್ತಿರುವುದನ್ನು ಪ್ರಕೃತಿಗೆ ಹೋಲಿಸಿ ಹೇಳಿರುವುದು ನಿಜಕ್ಕು ಅದ್ಭುತ.
ಈ ಪ್ರಕೃತಿಯೇ ಬದಲಾಗುವಾಗ ನಾವು ಬದಲಾಗುವುದರಲ್ಲಿ ಏನು ತಪ್ಪಿಲ್ಲಾ ಅನ್ನಿಸುತ್ತೆ ಅಲ್ವಾ?

ಸಿಂಧು sindhu said...

ಓಹ್,

ನಾನು ಈ ಕವಿತೆ ಬರೆದಾಗ ನನ್ನ ಮನದಲ್ಲಿ ತುಂಬಿದ್ದು ವಿಷಾದ. ಮನುಷ್ಯ ಬದಲಾಗುತ್ತಾನೆ ಆಗಬೇಕು ನಿಜ. ಆದರೆ ಅದೇ ಸರಿ, ಯಾರಿಗೆ ಏನೆನಿಸಿದರೆ ನನಗೇನು ಎಂಬ ಭಾವನೆಯಿಂದಲ್ಲ. ಈ ಕವಿತೆ ಒಂದರ್ಥದಲ್ಲಿ ಸ್ವಗತ. ನಿಮಗೆ, ಬರೆದವಳು ನಾನು ಎಂದು ಗೊತ್ತಿರುವುದರಿಂದ ಒಂದು ಬಗೆಯ ಒಪೀನಿಯನ್ ಫಾರ್ಮ್ ಆಗಿರುತ್ತದೆ ಓದುವ ಮೊದಲೆ.
ನಾವು ಬದಲಾಗುವಾಗ, ಸಂಬಂಧಿಸಿದ ವ್ಯಕ್ತಿಯ/ಗಳ ಭಾವನೆಗು ಹೆಚ್ಚಿನ ಗಮನ ಕೊಡಬೇಕು ಅಂತ ನನ್ನ ಅಭಿಪ್ರಾಯ. ಇದನ್ನು ಬರೆದಾಗ ನಾನು ಅಷ್ಟು ಪ್ರೀತಿಸುವ ಪ್ರಕೃತಿಯ ಛಾಯೆ ವ್ಯಕ್ತಿತ್ವದಲ್ಲೇ ಸೇರಿಹೋದಾಗ ಆಗಬಹುದಾದ ವಿಪರ್ಯಾಸ ನನ್ನನ್ನು ನೋವಿಗೆ ತಳ್ಳಿತ್ತು.

ಮೆಚ್ಚಿದ ಎಲ್ಲ ಸಹೃದಯರಿಗೆ ಧನ್ಯವಾದಗಳು.

chethan said...

thumba chennaagide.