Thursday, April 10, 2008

ಆತ್ಮೀಯರೊಬ್ಬರ ಸಂಗಾತ,

ಮೊನ್ನೆ ಎಲ್ಲೋ ಕಾಡು ಸುತ್ತಲು ಹೋದವರು ಹಾಗೇ ಕಡಲತೀರವನ್ನೊಂದಿಷ್ಟು ನೋಡಿಬಿಡುವಾ ಅಂತ ಹೋದೆವು. ಅಲ್ಲಿಸಿಕ್ಕ ಗೆಳೆಯನೊಡನೆ ಕಳೆದ ಒಂದ್ನಾಲ್ಕೈದು ಗಂಟೆಗಳು ತುಂಬ ತಂಪಾಗಿದ್ದವು. ಕಡಲ ತೀರದ ಮಾರ್ದವ ಬಿಸಿಯ ಮೇಲೆ ತೇಲಿ ಬರುವ ಗಾಳಿಯ ತಂಪು, ನುಣ್ಪು ಮತ್ತು ಬಿಸುಪು ಎಲ್ಲದರ ಒಟ್ಟಂದದಂತಿತ್ತು ಅವರೊಡನೆ ಕಳೆದ ಸಮಯ.

ತುಂಬ ದಿನದಿಂದ ನೋಡಬೇಕೆಂದಿತ್ತು ಇಬ್ಬರಿಗೂ. ಅವಕಾಶವಾಗಿರಲಿಲ್ಲ. ಅವತ್ತು ಅಚಾನಕ್ಕಾಗಿ ಸಿಕ್ಕಿ ಇಬ್ಬರಿಗೂ ಮಾತು ಮೊದಲು ಮಾಡಲು ಗೊತ್ತಾಗಲಿಲ್ಲ. ಒಂದೆರಡು ದೋಸೆ, ಕಾಫಿ, ಲಸ್ಸಿ, ಮತ್ತು ಅಳಿವೆಯೊಂದರಲ್ಲಿ ದೋಣಿಯಾನ, ಜನರಿಂದ ತುಂಬಿರದ ಕಡಲ ತೀರ, ಮಾತು ಮಾತು ಮಾತು.. ಎಲ್ಲ ತುಂಬ ಹಿತವಾಗಿತ್ತು. ಯುಗಾದಿಯ ಹಿಂದಿನ ದಿನ ಮುಕ್ಕಿದ ಆಲೆಮನೆಯ ಬೆಲ್ಲದ ಸಿಹಿಯಿತ್ತು.
ಹೆಚ್ಚು ಹೆಚ್ಚು ಬರೆಯಲಿಕ್ಕೇನಿಲ್ಲ. ತುಂಬ ಸಂತಸ ನನಗೆ ಅವರ ಕಂಡು. ನೋಡಿದ ಸುತ್ತಿದ ಕಾಡೆಲ್ಲ, ಕಾಡಿನ ಪ್ರೀತಿಯೆಲ್ಲ ಮೈವೆತ್ತಂತಹ ವ್ಯಕ್ತಿಯ ಭೆಟ್ಟಿಯಾಗಿ ಮನಸು ಉಲ್ಲಸಗೊಂಡಿದೆ.
ನಮಗಾಗಿ ಸಮಯ ಕೊಟ್ಟು, ಜೊತೆಗೂಡಿದ ಈ ಸ್ನೇಹಿತರಿಗೆ ಪ್ರೀತಿಪೂರ್ವಕ ವಂದನೆಗಳು.

Wednesday, April 2, 2008

ಹಸಿರ ಹೊದ್ದವಳು ಕಾದಿದ್ದಾಳೆ

ಹಸಿರ ಹೊದ್ದವಳು ಕಾದಿದ್ದಾಳೆ
ಹೊಳೆಯ ಹೊಸ್ತಿಲಲಿ
ನೆನಪಿನ ದೀಪ ಹಚ್ಚಿ..
ಏನೂ ಇಲ್ಲದೆ,
ಸುಮ್ಮನೆ,
ಮಾತ ಕದ್ದು
ಮೌನ ಬಡಿಸಿ
ಹಕ್ಕಿಗೊರಳ ಇಂಚರ ನೇಯುತ್ತಾ
ಖಾಲಿ ಬದುಕನ್ನ ತುಂಬಿ ತುಳುಕಿಸಲು..
ಹಸಿರ ಹೊದ್ದವಳು ಕಾದಿದ್ದಾಳೆ


ಇನ್ನೇಕೆ ಮಾತು.
ಬಿಂಕವಿಲ್ಲ,
ಮಾತ ಕಟ್ಟಿಟ್ಟುಹೊರಟೆ..
ಜೊತೆಗಿರುವನು ಚಂದಿರ.

ಆಮೇಲೆ ಸೇರಿಸಿದ್ದು.. ಈ ಹಸಿರು ಪಯಣದ ನೆನಪಿನ ಬರಹ ಕೆಂಡಸಂಪಿಗೆಯಲ್ಲಿ..
ಲಾವಂಚ -
http://www.kendasampige.com/article.php?id=514