Friday, November 27, 2009

ಬಚ್ಚಲ ರೊಚ್ಚು..

ಅವನಿಂದ ನೂರಾಅರವವತ್ನಾಲ್ಕಕ್ಕೂ ಹೆಚ್ಚು ಮನೆಯ ದೀಪಗಳು ನಂದಿದವು. ಅವನ ಯೋಚನೆಗಳು ಕ್ರೌರ್ಯದ ಪರಮಾವಧಿಯವು ಮತ್ತು ನೀಚ ಉದ್ದೇಶಗಳು. ಇದರ ಬಗ್ಗೆ ಯಾವುದೇ ಧರ್ಮ,ಜಾತಿ,ರಾಷ್ಟ್ರೀಯತೆಯನ್ನು ಮೀರಿ ಎಲ್ಲರ ಅಭಿಪ್ರಾಯವೂ ಒಂದೇ.
ಆದರೆ ಅದೇ ಅವನಿಂದ ನಾಡಿನ ಎಲ್ಲ ಮಾಧ್ಯಮಗಳ ಮಾರಾಟ ಮತ್ತು ಮೌಲ್ಯವರ್ಧನೆ ಆಗುತ್ತಿರುವುದು ಅಸಹ್ಯದ ಪರಮಾವಧಿ ಎಂಬುದು ನನ್ನ ಅನಿಸಿಕೆ.
ಅವನು ಈಗ ಕಟಕಟೆಯಲ್ಲಿದ್ದಾನೆ. ಅವನ ಮೇಲೆ ಸರ್ಕಾರ ಇಷ್ಟು ಖರ್ಚು ಮಾಡಿದೆ ಅಷ್ಟು ಖರ್ಚು ಮಾಡಿದೆ, ಇಟ್ಟುಕೊಳ್ಳುವುದೇಕೆ, ಕಲ್ಲು ಹೊಡೆದೋ ಗುಂಡು ಹೊಡೆದೋ ಕೊಂದುಬಿಡಬೇಕು ಎಂದು ಆವೇಶದಲ್ಲಿ ಯೋಚಿಸುವ ಮುನ್ನ ಹುತಾತ್ಮ ಮೇ.ಸಂದೀಪ್ ಉನ್ನಿ ಕೃಷ್ಣನ್ ಅವರ ಅಪ್ಪ ನೀಡಿದ ಉತ್ತರವನ್ನು ದಯವಿಟ್ಟು ಓದಿ ಮನನ ಮಾಡಿಕೊಳ್ಳಿ. [ನನಗೆ ಆ ನರಕೀಟದ ಹೆಸರನ್ನು ೨೪ ಸಲ ಬರೆಯಲು ಮತ್ತು ಓದಲು ಅಸಹ್ಯವಾದದ್ದರಿಂದ ಅವನ ಹೆಸರು ಬಂದಲ್ಲೆಲ್ಲ ಕಪ್ಪು ಬಣ್ಣ ಬಳಸಿದ್ದೇನೆ.]
ಈ ನರಹಂತಕನ ಮುಖ ನೋಡಬೇಕೂನಿಸುತ್ತಾ ನಿಮಗೆ ಅಂತ ನಮ್ಮ ಮಾಧ್ಯಮ ಪ್ರತಿನಿಧಿ ಶಿಖಾಮಣಿ ಮಾಡಿದ ಪ್ರಶ್ನೆಗೆ ಅವರು ಹೇಳಿದ್ದಿಷ್ಟು –
ಈ ಮಹಾನ್ ತಂದೆಯ ಯೋಚನೆಯನ್ನ ದೃಷ್ಟಿಕೋನವನ್ನ ಗೌರವಿಸುವುದು ಈ ಸಂದರ್ಭದಲ್ಲಿ ತುಂಬ ಸೂಕ್ತ.
ಎಷ್ಟು ಕೋಟಿಗಳೂ ನಾವು ಕಳೆದುಕೊಂಡ ಅಮೂಲ್ಯ ಜೀವಗಳಿಗೆ ಸಮನಲ್ಲ. ಈ ತರಹದ ಘಟನೆಗಳು ಮುಂದೆ ನಡೆಯದ ಹಾಗೆ ಜವಾಬ್ದಾರಿ ತೆಗೆದುಕೊಳ್ಳುವವರು ಮಾಡುತ್ತಿರುವ ಕೆಲಸ ಮಧ್ಯೆ ಅನಾವಶ್ಯಕ ಭಾವೋದ್ವೇಗದ ಆರೋಪಣೆಗಳು ಸಲ್ಲ.
ಆ ಕರಾಳ ದಿನ ಜೀವ ಕಳೆದುಕೊಂಡ ಮತ್ತು ಜೀವರಕ್ಷಣೆಗಾಗಿಯೇ ಜೀವತೆತ್ತ ಎಲ್ಲರ ನೆನಪಿಗೆ ತಲೆಬಾಗುತ್ತಾ,
ಪ್ರೀತಿಯಿಂದ
ಸಿಂಧು.
[ಮಾಹಿತಿ ಚಿತ್ರದ ಮೂಲ - ವಿಜಯಕರ್ನಾಟಕ ೨೬.೧೧.೦೯]

Monday, November 2, 2009

ತವಕ..ತಲ್ಲಣ.ಸಂತಸ.. - ಮಿಶ್ರಮಾಧುರ್ಯ ಸೀರೀಸ್

ರದನೋದಯ ಜ್ವರ ದಮ್ ರೋಟ್ ಮೇಲೆ ನಡೆಯುತ್ತಾ ಇದೆ. :)
ಇನ್ನೂ ಹಲ್ ಬಂದಿಲ್ಲ ಹಲ್ ಸೆಟ್ಟಿಗೆ ಆರ್ಡರ್ ಕೊಡಬೇಕೋ ಏನೋ ಅಂತ ಯೋಚನೆ ಮಾಡುತ್ತಾ ತುತ್ತು ಇಡುವಾಗ ಬೆರಳು ಕಡಿದು ಬಿಡಬೇಕೇ..!!
ಟುಪ್ಪೂಗೆ ಹನ್ನೊಂದು ತುಂಬಿತು..!
ಸಣ್ಣದಾಗಿ ಜ್ವರ ಮತ್ತು ಆಗ ಈಗ ಲೂಸ್ ಮೋಶನ್ ಆಗ್ತಾ ಇದ್ರೂ, ದಮ್ರೋಟ್ ಮಾಡಿದ್ರೆ ತಿನ್ನದೆ ಹ್ಯಾಗಿರೋದು ಅಂತ ಚಪ್ಪರಿಸಿಕೊಂಡು ತಿನ್ನುತ್ತೆ ಈ ಪುಟ್ಟಗುಬ್ಬಿ ಈಗ. ಹನ್ನೊಂದು ಮಾಸಗಳುರುಳಿ ವರ್ಷದ ಹೆಜ್ಜೆಗಳು ಮೆತ್ತಗೆ ಮೂಡ್ತಾ ಇದೆ.
ಮರಿಗೆ ಕೈಬಿಟ್ಟು ನಡೆಯಲು ತವಕ, ನೋಟ ಸಕ್ಕತ್ತಾಗಿರುತ್ತಾದರೂ ಅಮ್ಮನಿಗೆ ತಲ್ಲಣ. :)

Tuesday, September 29, 2009

::ಸೃಷ್ಟಿ ಶುಭದಾಯಿನಿ::

::ಮಾತುಗಳನ್ನು ಮೀರಿದ ಬೆಡಗು::
ಬೆರಗು,ಹೊನಲು,ನಸು-ಬೆಳಗು,ಬೆಳದಿಂಗಳ ಮಿಶ್ರ ಮಾಧುರ್ಯಕ್ಕೀಗ 10 ತಿಂಗಳು!

Friday, September 25, 2009

Ground Reality hurts.. n its unfair world!

ಸಮಾನತೆ, ಸ್ವಾತಂತ್ರ್ಯ
ಸ್ವಾವಲಂಬನೆ
ಒಳ್ಳೆಯ ಉಕ್ತಲೇಖನದ ಪದಗಳು.
ಎಷ್ಟೇ ಸರಿಯಾಗಿ ಬರೆದರೂ
ಅವು ಪುಸ್ತಕದ ಮೇಲೆ ಮಾತ್ರ.
ಮಾತುಗಳಲ್ಲಿ ಬಂದರೂ
ಭಾಷಣಗಳಲ್ಲಿ ಮಾತ್ರ.
ಪದಗಳಲ್ಲಿ ಮೂಡಿದರೂ
ಪ್ರಶಸ್ತಿ ಪಡೆಯುವ ಕವಿತೆಗಳಿಗೆ ಮಾತ್ರ.
ಚಿತ್ರದಲ್ಲಿ ಬರಬೇಕಿದ್ದರೆ
ಕಲಾತ್ಮಕ ಸಿನಿಮಾಗಳಿಗೆ ಮಾತ್ರ.
ಬದುಕಿನ ಸ್ತರವೇ ಬೇರೆ
ಹೆಣ್ಣು ಯಾವತ್ತಿದ್ದರೂ ಹೊಂದಾಣಿಕೆಗೆ ಮಾತ್ರ.

Friday, August 28, 2009

ಅಶ್ರುತ ಗಾನ..

ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ
ಮೂಟೆ ಕಟ್ಟಿಟ್ಟ
ಆಹ್ಲಾದದ ಹಾದಿಯದು
ಪುಲ್ಲ ಕುಸುಮಿತ ದ್ರುಮದಲ ಶೋಭಿನೀ
ಹೊರೆಗೆಲಸದ ಕಟ್ಟೆಯಿಳಿದು
ಕಾಲು ಚೆಲ್ಲಿದ ಕೂಡಲೆ
ಮುತ್ತಿಡುವ ಆಶಾದಾಯಿನಿ

ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ
ಅನುಕೂಲಗಳ ಆತಂಕರಹಿತ
ಅನಾಹತ ಹೈವೇಗೆ ಬಂದಾಯಿತು
ಇಲ್ಲೇ ಸುದೂರದಿ
ನೀಲಿಗೆರೆಯ ಸುತ್ತಲ
ಹಸಿರು ಪದರದ ಹಾದಿಯ ಸಂಜೀವಿನೀ
ದೂರವೇನಿಲ್ಲ,
ಕಾಲಿಗೆ ದಕ್ಕುವುದಿಲ್ಲ,
ನಡುವೆಯಿರುವುದೀಗ
ದಾಟಿ ಹಾರಬಹುದಾದ ಕಿಟಕಿಯಲ್ಲ
ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!
ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ
ಹಿಂದೆ ತಿರುಗಿ ಹೋಗಬಹುದೆ?
ಅದರ ಗುಟ್ಟು ನನಗೆ ತಿಳಿಯದಲ್ಲ..!
ಕೂತು ಯೋಚಿಸಲು ಗಡಿಬಿಡಿ
ಕೊನೆಗೆ ಷರಾ ಹೋಗಲಿಬಿಡಿ..
ಆಕಡೆ ನೋಡದಿದ್ದರಾಯಿತು
ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ

ಆದರೂ...

ಈಗ ಇಲ್ಲದಿದ್ದರ ಕುರಿತು
ಕೊರಗಿ ನಲುಗುವ ಮೊದಲು
ಒಂದು ಕೃತಜ್ಞತೆ ಹೇಳಬೇಕಿದೆ,
ಇಲ್ಲಿಯವರೆಗೆ ನಿಲುಕಿದ್ದಕ್ಕೆ
ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ
ಕೇಳದೆಯೇ ಒಲಿದು ಬಂದದ್ದಕ್ಕೆ
ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ
ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ
ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?

ಸಂಕಟಕಳೆದು
ನಲಿವು ಮುಗಿದು
ಸ್ಥಿತಪ್ರಜ್ಞಯೋಗದಲ್ಲೂ
ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!

ನೀಲಾಂಬರದ ನಡುವಿನ ಚಂದಿರನ ಸೇರಲು ನಗುತ ಹೊರಟ ರೋಹಿಣಿ..

ಮಲ್ಲಿಗೆಯ ಪರಿಮಳದ ಹಾದಿ ಹಿಡಿದು ನಡೆದ ವೆಂಕಮ್ಮ ಕೆ.ಎಸ್.ನ ಅವರ ಬಗೆಗೆ ನನ್ನ ನುಡಿನಮನವನ್ನ ಕೆಂಡಸಂಪಿಗೆ ಪ್ರಕಟಿಸಿದೆ.
ನಿನ್ನೆ ಬುಧವಾರ ಬೆಳಿಗ್ಗೆ
ತನ್ನ ಹಾದಿ ಕಾಯುತ್ತ ಕೂತಿರಬಹುದಾದ
ಕವಿಚೇತನವನ್ನ ಸೇರಲು
ಅವರ ಮನೆಯೊಡತಿ ಹೊರಟು ಹೋಗಿದ್ದಾರೆ.

ಕಾವ್ಯಶ್ರೀ..ಯ ಹಿರಿಯಚೇತನಗಳನ್ನ ಕಳೆದುಕೊಂಡ ಅವರ ಕುಟುಂಬದವರಿಗೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಬರಲಿ.
ಪ್ರೀತಿಯ ನಮನಗಳು ವೆಂಕಮ್ಮನವರಿಗೆ.

ಪ್ರೀತಿಯಿಂದ
ಸಿಂಧು