Friday, October 5, 2012

ರೂಪಾಂತರ

ಕೈಯಲ್ಲಿ
ಹೂಗೊಂಚಲು ಹಿಡಿದ
ಹೂಮೊಗವ
ತುಂಬಿದ ನೆರಳು
ನನಗೆ ಗೊತ್ತು.
ತುಂಟತನದಲ್ಲಿ
ಅದ್ದಿ ತೆಗೆದ ಮೂರ್ತಿಯ
ಕಣ್ಣಿನಲ್ಲಿ ಪ್ರತಿಫಲಿಸುವ
ಅಭದ್ರತೆಯ ಭಾವವೂ ಗೊತ್ತು.

ಹಿಡಿದು ಎರಡು ತಟ್ಟಬೇಕೆನ್ನಿಸುವಷ್ಟು
ಸಿಟ್ಟು ಬಂದರೂ
ಸುಮ್ಮನೆ ತಬ್ಬಿಕೊಳ್ಳುತ್ತೇನೆ.
ಬಯ್ಗುಳವ ಬಂದ ದಾರಿಯಲ್ಲೆ
ವಾಪಸ್ ಕಳಿಸಿ
ಆ ಬಾಯಲ್ಲೆ ನಿನ್ನ ಕೆನ್ನೆಗೆ
ಮತ್ತೊಂದು ಮುತ್ತಿಡುತ್ತೇನೆ.

ತಮ್ಮನ ಕೆನ್ನೆ ಚಿವುಟಲು
ಹೋಗಿ
ಮೆತ್ತಗೆ ಸವರುವ
ಆ ಸಿರಿಕರಗಳಿಗೆ
ಕರುಣಾರವಿಂದಗಳಿಗೆ
ನನ್ನ ತಲೆಯಿಡುತ್ತೇನೆ.

ಬಾಲ್ಯಕ್ಕೆ
ಸ್ವಲ್ಪ ಇರಿಸುಮುರಿಸಾದರೂ
ನಿನ್ನ ಬದುಕಿಡೀ
ಜೊತೆಯಾಗುವ
ಈ ಜೀವ ನಿನಗೆ
ತುಂಬ ಇಷ್ಟವಾಗತ್ತೆ
ಅಂತ ಗೊತ್ತು.
ನನಗೊಬ್ಬ
ತಮ್ಮನಿರುವ
ನಿರಾಳ
ನನಗಷ್ಟೇ ಗೊತ್ತು.

ಚಂದಚಿಟ್ಟೆಗೂ
ಮೊದಲು
ಕಂಬಳಿಹುಳು
ರಾತ್ರಿಯ ಒಡಲಲ್ಲೇ
ಬೆಳಕಿನ ಬೀಜ.

7 comments:

  1. ಸಿಂಧು,
    ಬಹು ದಿನಗಳ ನಂತರ, ನಿಮ್ಮ ಕವಿತೆಯ ಅಮೃತಪಾನ!
    ನಿಮ್ಮ ಕವಿತೆ ಯಾವಾಗಲೂ ಚಂದದ ಚಿಟ್ಟೆಯೇ. ಮನಕ್ಕೆ ಮುದ ನೀಡುವ ಕವನ.

    ReplyDelete
  2. Loved the ending:) ನಿಮ್ಮ ಬರೆಹಗಳನ್ನು ಓದುವುದೇ ಒಂದು ಖುಶಿ. ಅಹಲ್ಯಾ ಬಲ್ಲಾಳ್

    ReplyDelete
  3. Loved the ending.:)ನಿಮ್ಮ ಬರೆಹ ಓದುವುದೇ ಒಂದು ಖುಶಿ. ಅಹಲ್ಯಾ ಬಲ್ಲಾಳ್

    ReplyDelete
  4. tumba khushi aytu Sindhu nimma kavithe noDi tumba divasagaLa nantara :-)

    ~Shubha Ajay

    ReplyDelete
  5. ತುಂಬಾ ಸೊಗಸಾದ ಕವನ.

    ಚಂದಚಿಟ್ಟೆಗೂ
    ಮೊದಲು
    ಕಂಬಳಿಹುಳು
    ರಾತ್ರಿಯ ಒಡಲಲ್ಲೇ
    ಬೆಳಕಿನ ಬೀಜ.

    ಇದು ನಿಜಕ್ಕೂ ಹೊಸತನದ ಸಾಲು...

    ReplyDelete
  6. @ ಸುನಾಥ ಕಾಕಾ,
    ನಿಮಗೆ ಖುಶಿಯಾಗಿದ್ದೇ ನನಗೆ ಖುಶಿ. ಹೂಂ ಈಗ ಅಮ್ಮನ ಅವತಾರವೊಂದಿದೆಯಲ್ಲಾ! ಸಮಯಾಭಾವ.

    @ನಿಧಿ
    ಪಂಡಿತರ ಸಹವಾಸ - ದಾರವೂ ಹೊರಟಿದೆ... :-)

    @ಅಹಲ್ಯಾ
    ನಿಮ್ಖುಶೀ ನಂಗೂ ಬಂತು. ಥ್ಯಾಂಕ್ಯೂ.

    @ಶುಭಾ,
    ಮಧುರಳ ಅಮ್ಮಾ ನಿಮ್ಮ ಮಾಧುರ್ಯನೂ ಸ್ವಲ್ಪ ಹಂಚಿ ನಮ್ಗೆ.
    ಹೆಂಗಿದ್ದೆ? ಮನೆಗ್ ಬನ್ನಿ.

    @ಶಿವು.
    ನಿಮ್ಮ ವೆಂಡರ್ ಕಣ್ಣಿಗೆ ಹಿತವುಂಟು ಮಾಡಿದ್ದರೆ ಅಷ್ಟರ ಮಟ್ಟಿಗೆ ಸಾರ್ಥಕ ಇದು.
    ಥ್ಯಾಂಕ್ಸ.

    ಪ್ರೀತಿಯಿಂದ,
    ಸಿಂಧು

    ReplyDelete