Tuesday, September 27, 2011

ಸುಗಂಧ ಸಮೀರ

ಸುಮ್ಮಗೆ ನೆಲದ ಮೇಲೆ
ಕಾಯುತ್ತ ಕೂತವಳ
ಎದಿರು
ಸಗ್ಗದಿಂದಿಳಿದಂತೆ
ನೀನು
ಹಾಜರಿ ಹಾಕಲು -
ಮೋಡವಾಗಿ ಬನಿಇಳಿವ
ಮೊದಲೇ
ಈ ಹನಿ
ಶರಧಿಯೊಳಗೆ ತಲ್ಲಣಿಸಿ
ಆವಿಯಾಗಿತ್ತೆಂಬ ಅರಿವು.
ಎಳೆಯ ಕಾಲದಿ ಬಿತ್ತಿದ
ಮೊಳಕೆಮೂಡದ ಬೀಜ
ಏರುಬದುಕಿನ ಬಿರುಹಾದಿಯಲಿ
ನೆರಳಿಗೆ ಹೊರಳಿದರೆ ತಂಗಾಳಿ
ಸೂಸುವ ಎಲೆಮರ,
ನೆನಪ ಗಂಧ ತೇಯುವ
ಕಲ್ಲು ಮನದ ಸುತ್ತ ಸುಳಿವ
ಸುಗಂಧಿತ ಸಮೀರ.
ನೀನು ಮೊನ್ನೆಯ ನಿಜ.
ಇವತ್ತೂ ನಿಜವೇ.
ಕಳೆದ ಕಾಲದ ಕನ್ನಡಿಯಲಿ
ನಿತ್ಯ ನೂತನ
ಮಂದಹಾಸವರಳಿಸುವ
ಮುಟ್ಟಲಾಗದ ನಿಜ.
ನಿಲುಕಲಾರದ ಅಳುಕಲ್ಲು
ಸವರಿ ಸಂತೈಸಿಕೊಳ್ಳುವೆ
ಕವಿತೆ ಬರೆವ ಲಹರಿ
ಅಲ್ಲು ಇಲ್ಲು ಎಲ್ಲೂ.
ಪೋಣಿಸಿದ ಅರಳು ಮೊಗ್ಗು
ಆಹ್ಲಾದ
ಕನಸು ಮನಸು
ನನಸಲ್ಲೂ!

4 comments:

  1. ಸಿಂಧು,
    ನಿಮ್ಮ ಈ ಆಹ್ಲಾದ ಸ್ಥಿರವಾಗಿರಲಿ. ಸುಗಂಧ ಸಮೀರ ಯಾವಾಗಲೂ ನಿಮ್ಮ ಸುತ್ತಲೂ ಸುಳಿಯುತ್ತಿರಲಿ. ಕವನಗಳು ನಿಮ್ಮಲ್ಲಿ ಯಾವಾಗಲೂ ಅರಳಿ, ಆ ಸುಗಂಧವನ್ನು ನಮಗೆ ಹರಡಲಿ.
    ಸಿಂಧು, ನವ್ಯ ಕಾವ್ಯದ formatನಲ್ಲಿಯೇ ಭಾವಗೀತೆಯ ಸರಸ ಭಾವೋತ್ಕರ್ಷವನ್ನು ತುಂಬಬಲ್ಲವರು ನೀವೊಬ್ಬರೇ ಎಂದು ನನಗೆ ಅನಿಸುತ್ತದೆ.

    ReplyDelete
  2. ಪ್ರಿಯ ಸುನಾಥ,

    ಇದು ತುಂಬ ದೊಡ್ಡ ಮಾತು. ಈ ಸಣ್ಣವಳ ನಿಲುಕಿಗೆ ಮೀರಿದ್ದು.
    ನನಗೆ ಏನು ಹೇಳಲೂ ತೋಚುತ್ತಿಲ್ಲ.
    ನಿಮ್ಮ ಉದಾರ ಅಭಿಮಾನಕ್ಕೆ ನನ್ನ ಶರಣು.

    ಪ್ರೀತಿಯಿಂದ,
    ಸಿಂಧು

    ReplyDelete
  3. hosa prayoga,

    tumba ishtavaada saalugalu

    baduku hasanaagirali

    ReplyDelete
  4. ನವ್ಯದ ಲಾಸ್ಯ ನಿಮ್ಮ ಕವನಗಳಲ್ಲಿ ವಿನೂತನ...

    ReplyDelete