Tuesday, December 15, 2009

...

ಹಾಲಿನ ಕೂಪನ್, ಕೇಬಲ್ಲು,
ಫೋನು ಮತ್ತು ಕರೆಂಟು ಬಿಲ್ಲು,
ತರಕಾರಿ, ದಿನಸಿ,
ಮತ್ತಿನ್ಯಾವುದೋ ಮಾಡದೆ ಉಳಿದ ಕೆಲಸ
ಎಲ್ಲ ಹಾಗೆ ಇರಲಿ ಬಿಡು.
ಈಗ ಮೊದಲಿಂದ ಮಾತಾಡೋಣ
ಯಾವ ಅಜೆಂಡಾವೂ ಇಲ್ಲದೆ
ಅವತ್ತು ಸಂಜೆ ಗಿರಿಯ ಮೇಲೆ
ಮೌನದ ಚಿಪ್ಪೊಡೆದು
ಹೊರಬಂದ
ಮುತ್ತುಮಾತುಗಳ
ನೆನಹುಗಳ ನೇಯುತ್ತ -
ಇವತ್ತಿನ ಸಂಭಾಷಣೆಯ ಸಿಂಗರಿಸೋಣ,
ಯಾವ ಮಾತೂ ಆಡದೇ ಇದ್ದರೂ ನಡೆದೀತು,
ಏನೂ ಅಲ್ಲದ -
ಏನೋ ಆಗಬೇಕಿಲ್ಲದ
ಆ ಮುಗ್ಧ ಭಾವಕ್ಕೆ ಮತ್ತೊಮ್ಮೆ ಒಡಲ ನೀಡೋಣ
ಹೂವು, ಹಕ್ಕಿ,
ನೀರು, ನೆರಳು,
ಸಂಜೆಗೆಂಪು ಪಯಣದ ಹಾದಿಯ ಬದಿಗೆ
ಮತ್ತೆ ಸರಿಯೋಣ
ಕೆಲನಿಮಿಷಗಳ ಮಟ್ಟಿಗಾದರೂ..
ಹಾಗೇ ಇರಲಿ ಬಿಡು
ಕಟ್ಟದೆ ಉಳಿದ ಬಿಲ್ಲು.

7 comments:

  1. ಜೊಂಜಾಟದ ಜೀವನಕ್ಕೆ ಕ್ಷಣವಿರಾಮ ಕೊಟ್ಟು ನೆಮ್ಮದಿಯನ್ನು ಎಳೆದುಕೊಳ್ಳುವ ಪರಿಯನ್ನು ನಿಮ್ಮ ಕವನ ಸುಂದರವಾಗಿ ಹೇಳಿದೆ.

    ReplyDelete
  2. ಸಿಂಧು, ಬಹಳ ಚೆನ್ನಾಗಿ ಮತ್ತು ಕ್ರಿಯೇಟಿವ್ ಆಗಿ ಬರೆದಿದ್ದೀರ.

    ReplyDelete
  3. ತುಂಬಾ ಸೊಗಸಾಗಿದೆ ನಿಮ್ಮ ಸಾಲುಗಳು

    ReplyDelete
  4. ಸಿಂಧು,
    ದೈನಂದಿನ ಜೊಂಜಾಟವನ್ನು ಬದಿಗೆ ಸರಿಸಿ, ರಸನಿಮಿಷವನ್ನು ಕಾಣುವ ತವಕ ಈ ಕವನದಲ್ಲಿ ವ್ಯಕ್ತವಾಗಿದೆ. ಇದು ಹೀಗೆಯೇ ಇರಲಿ.

    ReplyDelete
  5. ಕೆಲನಿಮಿಷಗಳ ಮಟ್ಟಿಗಾದರೂ..
    ಹಾಗೇ ಇರಲಿ ಬಿಡು
    ಕಟ್ಟದೆ ಉಳಿದ ಬಿಲ್ಲು....

    very nice memorable lines sindhu

    ReplyDelete
  6. ಸುನಾಥ,
    ನಿಮ್ಮ ಮೆಚ್ಚುಗೆಯಿಂದ ಖುಶೀ. ರಸನಿಮಿಷದ ರಸಪಾಕಕ್ಕೆ (alchemy) ಸದಾ ಪ್ರಯತ್ನಿಸುತ್ತಲೇ ಇದ್ದೀನಿ. ;)

    ಶ್ರೀಕಾಂತ್,ಇಂಚರ,ವೇಣು
    :) ನಿಮ್ಮ ಮೆಚ್ಚುಗೆಯಿಂದ ನನಗೆ ಖುಶೀ.

    ಪ್ರೀತಿಯಿಂದ
    ಸಿಂಧು

    ReplyDelete
  7. ಬದುಕಿನಲ್ಲಿ ಖಶಿಯ ನಾಡಿ ಹಿಡಿವ ನಿಮ್ಮ ರೀತಿ ಇಷ್ಟವಾಯಿತು.

    ReplyDelete