Thursday, July 2, 2009

ಕರುಣಾಳು ಬಾ ಬೆಳಕೆ..

ಸಂಜೆ ಕಾವಳ ಕವಿದಿದೆ
ದೂರದಿ ತೇಲಿಹ ಕರ್ಮುಗಿಲ ಮಾಲೆ
ಭುವಿಯ ಮೈಗೆ ಮೆತ್ತಿದೆ
ಇನ್ನೇನು ಮಳೆ ಬರಲಿದೆ..
ದಿನದ ಬಿನ್ನಹಗಳ
ಆಲಿಪನೆಂದು ನಂಬಿದವನ ಮುಂದೆ
ಎರಡು ನಂದಾದೀಪ
ಬತ್ತಿ ಸರಿಮಾಡಿ ಎಣ್ಣೆತುಂಬಿಸಿ
ಕಡ್ಡಿ ಕೊರೆದರು ಗೌರಮ್ಮ
ದೇವರ ಮುಂದೆ ಚೆಂಬೆಳಕು
ಹಚ್ಚಿದ ಮೊಗದ ಮೇಲೂ
ಪ್ರತಿಫಲಿಸಿ ಚೆಲ್ಲಿದ ಬೆಳಕು,
ಕಾವಳ ಸರಿಯಿತೆ ಹೊರಗೆ?!

ಸಮಾನತೆಯ ಬೇರಿನ
ಕಷಾಯ ಕುಡಿದವಳಿಗೆ
ಇರಿಸುಮುರಿಸು
ಅವರು ಹಚ್ಚಬಹುದೆ ದೀಪ
ಅತ್ತೆ ಸ್ವತಃ ಹುಣಿಸೆಹಣ್ಣು
ತಿಕ್ಕಿ ತೊಳೆದು ಇಟ್ಟ ದೀಪ !
ಸಂಜೆ ಕಾವಳ ಇಳಿದಿತ್ತು
ಮನಸಿನ ಒಳಗೆ;
ದೀಪದ ನಿಹಾರಿಕೆ ಹೊರಗೆ;
ದೇವರೆಡೆಗೆ.
ವಿಚಾರವೇನಿದ್ದರೂ ಮಾತಿಗೆ,
ಬರವಣಿಗೆಗೆ,
ಕೊನೆಗೂ ದೀಪದ ಸುತ್ತ ಕತ್ತಲೆ,
ಬೆಳಕು ಮಾತ್ರ ಬೆಳ್ಳಗೆ,
ಕಪ್ಪಿಡದೆ.. ತನ್ನ ಪಾಡಿಗೆ ತಾನಿದೆ..

ನಕ್ಕಳೊಬ್ಬ ಕಿನ್ನರಿ
ಹರಿಯಿತೊಂದು ಬೆಳಕ ಝರಿ
ಮನೆದೇವರನ್ನೆ
ಮಡಿಲಿಗೆ ತುಂಬಿಹೆನು
ದೀಪ ಹಚ್ಚಬಾರದೆ
ದೇವರಿಗೂ ಮೈಲಿಗೆಯೇ?!

ಹಬ್ಬಿದ ಕಾವಳ ಕರಗಿ
ಮೋಡಒಡೆದು ಮಳೆಯಾಗಿ
ಗೌರಮ್ಮನಲಿ
ಅಮ್ಮನದೇ ಬಿಂಬ
ಮನದ ಕಪ್ಪು ತೊಳೆದ ಬೆಳಕು
ಮತ್ತೆ ಮತ್ತೆ ಮಿನುಗಿ
ನಿತ್ರಾಣದಿ ಮೂಲೆಹಿಡಿದ
ವಿಚಾರದೆಳೆಯಲಿ
ಹೊಸ ಜೀವಸೆಲೆ.

7 comments:

  1. ಸಿಂಧು,
    ಭಾವದೀಪ ಬೆಳಗಲೂ ಸಹ ವೈಚಾರಿಕತೆಯ ಕಿಡಿ ಬೇಕಲ್ಲವೆ?
    ಕವನ ತುಂಬ ಸುಂದರವಾಗಿದೆ.

    ReplyDelete
  2. ಸಿಂಧು ಮೇಡಮ್,

    ಸೊಗಸಾದ ಕವನ...ಭಾವಪೂರ್ಣವಾಗಿದೆ...

    ReplyDelete
  3. ಸಿಂಧು,
    ತುಂಬಾ ಚೆನ್ನಾಗಿದೆ, ಪ್ರಭುದ್ದ ಕವನ

    ReplyDelete
  4. ರಂಜೂ,
    ಎಷ್ಟ್ ಚೆನಾಗಿ ಬೈತೆ ಮಾರಾಯ್ತಿ ನೀನು.. :)

    ಸುನಾಥ,
    ನಿಮ್ಮ ಮೆಚ್ಚಿಗೆಗೆ ಸಂದಿದ್ದು ನನಗೆ ಸಂತೋಷ.

    ನಿಧಿ,
    ಉದ್ಗಾರದ ಮುಂದಿನ ಸ್ಮೈಲಿ ಮತ್ತು ಹಿಂದಿನ ತುಂಟ ಭಾವ ಏನದು?

    ಶಿವು,ಸಾಗರದಾಚೆಯ ಇಂಚರ ಮತ್ತು ಜೋಮನ್,
    ನಿಮ್ಮ ಸ್ಪಂದನೆಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು.

    -ಪ್ರೀತಿಯಿಂದ
    ಸಿಂಧು

    ReplyDelete