ಮಾಮಾ ಇವತ್ತು ದೂರದ ಪಾರ್ಕಿಗೆ ವಾಲ್ಕಿಂಗ್ ಹೋಗೋಣ, ನಾನ್ ರೆಡೀ ಇದೀನಿ; ನೀನು? ನಾನಂತೂ ಯುನಿಫಾರ್ಮ್ ಬದಲಾಯ್ಸಿ, ಕಾಲ್ತೊಳೆದು, ತಿಂಡಿ ತಿಂದು ಹಾಲು ಕುಡಿದಾಯ್ತು. ಬಾ ಹೋಗೋಣ.. ಅಲ್ಲೆ ಕುರ್ಚಿಯಲ್ಲಿ ಕೂತು ಅರಳಿನಂತೆ ಪಟಪಟನೆ ಸಿಡಿಯುವ ಮುದ್ದು ಮಾತಾಡುವ ಅವಳನ್ನೆ ನೋಡಿದೆ. ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕು, ಅದಕ್ಕಿರುವ ಬಿಳಿಜೇಬಿನ ಮೇಲೆ ಬಣ್ಣ ಬಣ್ಣದ ಚಿಟ್ಟೆಯ ಚಿತ್ರ..
ಚುಕ್ಕೀ ಎಷ್ಟು ಮಾತು ನಿಂದು, ಮಾಮ ಇನ್ನೂ ಟೀ ಕುಡಿದಿಲ್ಲ. ಕುಡಿದಾದ ಮೇಲೆ ಹೋಗಿ..ಹೋಗುವಾಗ ಮಾಮನ ಕೈ ಹಿಡಿದೇ ಹೋಗಬೇಕು ಅದು ಬಸ್ಸು ಹೋಗುವ ಹೈವೇ. ಬಾಗಿಲಿಗೆ ಬಂದ ತಂಗಿ ಸವಿತ ಬಿಸಿ ಬಿಸಿ ಚಹಾ ಲೋಟ ಕೈಗಿಟ್ಟಳು.
ನಾನು ಸವಿತಳತ್ತ ನೋಡಿ ನಕ್ಕೆ. ಈಗಿನ ಕಾಲದ ಮಕ್ಕಳಲ್ವೇನೇ ಸವೀ.. ನಮಗಿಂತ ಹುಶಾರಾಗಿರ್ತಾರೆ. ಅವಳು ನಸುನಗುತ್ತ ಯಾರ ಸೊಸೆ ಅವಳೂ ಹೇಳು ಅನ್ನುತ್ತ ಚುಕ್ಕಿಯ ಕೆನ್ನೆಯನ್ನು ಮೃದುವಾಗಿ ಹಿಂಡಿ ಒಳಹೋದಳು.
ಈ ಮಾತುಕತೆಯನ್ನೆಲ್ಲ ಬಿಟ್ಟ ಕಣ್ಣು ಬಿಟ್ಟಂತೆ ಕೇಳುತ್ತಿದ್ದ ಚುಕ್ಕಿಯ ಮುಖದಲ್ಲಿ ಹೂನಗೆ. ನನಗೆ ಅವಳ ಅತ್ತೆಯಾಗಬೇಕಿದ್ದವಳು ನೆನಪಾದಳು.. ಆದರೆ ಅವಳ ಮೂಗು ಈ ತುಂಟಿಯಂತೆ ಉದ್ದಕಿರಲಿಲ್ವಲ್ಲಾ? ಈ ನಗುವೂ ಅಷ್ಟೆ ಹೌದೋ ಅಲ್ಲವೋ ಎಂಬಂತೆ ಬಿರಿದ ಕೇದಗೆ; ಪೂರ್ತಿ ಅರಳಿದ ಹೂವಂತಲ್ಲ..
ಚುಕ್ಕಿ ತೊಡೆಯ ಮೇಲೆ ಬಗ್ಗಿ ನಿಂತು, ಮುಖವನ್ನು ನನ್ನ ಹೊಟ್ಟೆಗೆ ಅವುಚಿಕೊಂಡು ಎಳೆಯುತ್ತಿದ್ದಳು ಬಾ ಮಾಮಾ ಹೋಗೋಣ, ಅಲ್ಲಿ ಸೂರ್ಯ ಮುಳುಗೋದ್ರೊಳಗೆ ಹೋಗಿ ನಾನು ಟಾಟಾ ಮಾಡ್ಬೇಕು. ಅವನು ಮನೆಗೆ ಹೋಗಕ್ಕೆ ಕಾಯ್ತಾ ಇರ್ತಾನೆ.. ನಗು ಬಂತು ಈ ಪುಟಾಣಿಯ ಆಸೆ ನೋಡಿ. ಎದ್ದು ಹೊರಟೆ. ಒಂದು ಕೈಯಲ್ಲಿ ಬೈನಾಕ್ಯುಲರ್ ಇತ್ತು, ಈಚೆ ಕೈಯ ಬೆರಳು ಹಿಡಿದು ಕುಣಿಯುತ್ತ ಬರುತ್ತಿರುವ ಜೀವನೋತ್ಸಾಹದ ಹಕ್ಕಿ..
ಪಾರ್ಕು ಹತ್ತಿರವಾದ ತಿರುವಿನಲ್ಲೊಂದು ದೊಡ್ಡ ಆಕಾಶಮಲ್ಲಿಗೆಯ ಮರವಿತ್ತು. ಮರದ ತುಂಬ ಗೊಂಚಲು ಗೊಂಚಲಾಗಿ ಬೆಂಡೋಲೆಗಳಿಗಿಂತ ಸೊಗಸಾಗಿ ಬಾಗಿದ್ದ ಹೂಗಳು.. ಆಹ್ ಮತ್ತೆ ನೆನಪಾಯಿತು ಅವಳ ನಗು.. ಬನದ ಕೇದಗೆಯಂತವಳು ನನ್ನ ಎದೆಯಲ್ಲಿ ಮೊದಲ ಪ್ರೇಮಕ್ಕೆ ಗೂಡಾದವಳು... ಅವಳ ನಗು..
ಮಾಮಾ ಅಲ್ ನೋಡು ಶಶಿ ಬಂದಿದಾನೆ ಇವತ್ತು ಪಾರ್ಕಿಗೆ, ಮಾಮಾ ನಾನವನ ಜೊತೆ ಜಾರುಬಂಡಿ ಆಡಿಬರುತ್ತೇನೆ.. ಹಕ್ಕಿ ನನ್ನ ಬೆರಳುಗಳನ್ನ ಬಿಡಿಸಿ ಜೊತೆಹಕ್ಕಿಯೆಡೆ ಹಾರಿತು..
ನಾನು ಅಲ್ಲೆ ಬದಿಯಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತೆ. ಮನಸ್ಸು ಪೂರ್ತಿ ಅವಳ ನೆನಪಿನ ಮೋಡ. ಕಣ್ಣು ಪಾರ್ಕಿನ ಹಸಿರನ್ನ ನೋಡುತ್ತಿತ್ತು ನೋಟ ಒಳಗೆ ತುಂಬ ಒಳಗೆ ಮಾಗಿದ್ದ ಕನಸಿನ ಪದರ ಬಿಚ್ಚಿ ಒಳಗಿನ ತಿಳಿನೀಲಿ ಬಣ್ಣ ನೋಡಿ ದಂಗಾಗಿತ್ತು.
ಅವಳು ಬೇಲಿಸಾಲಿನ ಎಲೆ ಮರೆಯಲ್ಲಿದ್ದ ಕಾಡುಹೂವೊಂದರ ಮೊಗ್ಗಿನಂತಿದ್ದಳು. ಇಷ್ಟು ದಿನದ ಬದುಕಿನಲ್ಲಿ, ಬಣ್ಣ ತುಂಬಿದ ಕಾಲೇಜಿನ ಕ್ಯಾಂಪಸ್ಸಿನಲ್ಲಿ, ರಾಮಮಂದಿರದ ಹೊರಗಿನ ಬಣ್ಣದ ಹೂಗಳ ಗುಂಪಿನಲ್ಲಿ, ಸಿನಿಮಾದಲ್ಲಿ, ಕತೆಯಲ್ಲಿ , ಸ್ನೇಹಿತರ ಮಾತುಕತೆಗಳಲ್ಲಿ ಎಲ್ಲೂ ಕಾಣಿಸಿರದ ಇನ್ನೂ ಪೂರ್ತಿ ಪಡಿ ಮೂಡಿರದ ಹೊಸದೇ ಚಿತ್ರದ ಹಸೀರೇಖೆಯಂತಹ ಅವಳು.. ಅವಳ ಬಣ್ಣ ಇನ್ನೂ ಪೂರ್ತಿ ತುಂಬಿರಲಿಲ್ಲ.. ರೇಖೆಗಳೇ ಗಟ್ಟಿಯಾಗಿ ಮೂಡಿರದವಳು ಅಂದೆನಲ್ಲಾ.. ರಾಜಧಾನಿಯ ವೈಭವದ ಮುಂದೆ ಕಣ್ಣು ಕೋರೈಸಿ ಸ್ವಲ್ಪ ಬೆಪ್ಪಾಗಿ ನಿಂತ ಅವಳ ಮೊಗದ ತುಂಬ ಆತಂಕ, ನೋಡಿ ನಕ್ಕರೆ ತಿರುಗಿ ನಕ್ಕೇ ನಗುತ್ತಾಳೆ ಅನ್ನಿಸುವ ಸ್ವಚ್ಛಕಣ್ಣು, ಯಾವ ಬಗೆಯ ಟ್ರೀಟ್ ಮೆಂಟಿನ ಮುಖ ನೋಡದೆ ಸೊಂಪಾಗಿ ಬೆಳೆದ ಉದ್ದ ಕೂದಲು, ಇದೆಲ್ಲಾ ಯಾಕೆ, ಹಳ್ಳಿಯೊಂದರಲ್ಲಿ ಆಗಷ್ಟೇ ಮೈ ತೊಳೆಸಿಕೊಂಡು ನಿಂತ ಪುಟ್ಟಕರುವಿನನಂತೆ ಮುದ್ದು ಬರುವ ಹಾಗವಳು ಅಲ್ಲಿ ನಿಂತಿದ್ದರೆ ನಾನು ಸಾಷ್ಟಾಂಗ ಮಲಗಿಬಿಟ್ಟೆ. ಎದ್ದವನ ಕಿವಿಗೆ ಬಿದ್ದಿದ್ದು ಗೆಜ್ಜೆಸದ್ದಿನ ಇಂಪಿನ ನಗೆ. ಸುತ್ತ ಗೆಳತಿಯರು ಯಾವುದೋ ಜೋಕಿಗೆ ಹೊಟ್ಟೆ ಹಿಡಿದು ನಗುತ್ತಿರುವ ಅವಳು.. ನಗುನಗುತ್ತಾ ನನ್ನ ನೋಡಿದಳು ನಾನು ಅಲ್ಲಿ ಕೀಲಿಸಿದ ಕಣ್ಣು ಕೀಳಲಿಲ್ಲ.
ಇರುಸುಮುರಿಸಾದ ಅವಳು ಮತ್ತೆ ಎತ್ತಲೋ ತಿರುಗಿ ಎರಡು ನಿಮಿಷ ಬಿಟ್ಟು ನೋಡಿದರೆ ನಾನು ಕಣ್ಣದಾಸರಂತೆ ಅಲ್ಲೇ.. ಕಣ್ಣೂ ಅಲ್ಲೇ ನೋಟವೂ ಅಲ್ಲೆ ನನ್ನ ಬದುಕನ್ನೆ ಬೊಗಸೆಯಾಗಿ ಹಿಡಿದು ಕಣ್ಣಲ್ಲಿಟ್ಟು ನಿಂತುಬಿಟ್ಟಿದ್ದೆ.. ಈಗ ಆ ಹೂಮೊಗದಲ್ಲಿ ಒಂದೆರಡು ಸಿಟ್ಟಿನ ನೆರಿಗೆ. ಮತ್ತೆ ಕೆಲನಿಮಿಷಗಳು ಬಿಟ್ಟು ನೋಡಿದರೂ ನಾನಲ್ಲೇ ನನ್ನ ನೋಟವಂತೂ ಅಲ್ಲೇ.. ಈಗ ಸಿಟ್ಟು ಅಸಹನೆಯಾಯಿತು.. ಬನ್ರೇ ಹೋಗೋಣ ಅಂತ ಗೆಳತಿಯರನ್ನು ಕರೆದುಕೊಂಡು ಹೊರಟಳು. ಹೋಗುವಾಗ ತಿರುಗಿದ ಜೋರಿಗೆ, ಆ ಉದ್ದ ಜಡೆ ಒಂದು ಸೆಮಿಸರ್ಕಲ್ ಹೊಡೆದು ಅವಳ ಸ್ಕರ್ಟನ್ನ ಮತ್ತೆ ಆತುಕೊಂಡಿತು.
ಬರೋದಿಲ್ಲವೆಂದರೂ ಕೇಳದೆ ಅಮ್ಮ, ರಾಧೂ ಅತ್ತೆಯ ಮನೆಯ ಸತ್ಯನಾರಾಯಣ ಕತೆಗೆ ಕರಕೊಂಡು ಹೋದರು. ಏನೋ ಹ್ಯಾಗ್ ಓದ್ತಾ ಇದೀಯೋ, ಯಾವಾಗ ಕೆಲ್ಸ ಹಿಡಿಯೋದು, ಅದೇನೋ ನಾಟಕದವ್ರ ಜೊತೆಗೆಲ್ಲಾ ಹೋಗ್ತೀಯಂತೆ ಒಳ್ಳೆದಲ್ಲ ಕಣೋ ಅನ್ನುವ ಕೊರೆತಗಳನ್ನ ಕೇಳಬೇಕಲ್ಲಪ್ಪಾ ಅಂತ ತಲೆಬಿಸಿ ಮಾಡಿಕೊಂಡು ಅಮ್ಮನ ಹತ್ತಿರ ಸಿಟ್ಟು ಮಾಡುತ್ತಾ ಹೋದೆ. ಅಲ್ಲಿ ಇಬ್ಬರೂ ಚಪ್ಪಲಿ ಬಿಚ್ಚಿ ಒಳಹೋಗುವುದಕ್ಕಿಲ್ಲ ಅವಳು ಕಾಣಿಸಿದಳು.. ಕೈಯಲ್ಲಿ ಸೇವಂತಿಗೆ ತುಂಬಿದ ಬುಟ್ಟಿ, ಆಗ ತಾನೆ ಸ್ನಾನ ಮಾಡಿ ಒಣಗಲು ಬಿಟ್ಟ ಕೂದಲು, ಉದ್ದಲಂಗ ಬ್ಲೌಸ್, ಯಾವ ಪುರಾಣಪಾತ್ರದ ಜಲವರ್ಣ ಇವಳು ಅಂತ ಯೋಚನೆಯಾಯಿತು.. ನಿಮಗೇ ಹೇಳ್ತಿರೋದು ಸ್ವಲ್ಪ ಜಾಗಬಿಡೀ.. ಆಂ ಹಾಂ ಅಂತಂದು ಸರಿದು ನಿಂತೆ.. ಅವಳು ದಾಟಿ ಹೋಗುವಾಗ ಮೊಗ್ಗರಳಿ ಹೂವಾದ ಅನುಭವ ಸುತ್ತೆಲ್ಲ ಅವಳು ಮುಡಿದ ಮಲ್ಲಿಗೆಯ ನರುಗಂಪು.
ಹೀಗೇ ಅಮ್ಮನ ಬೆನ್ನು ಹಿಡಿದು, ಅವಳ ಗೆಳೆತನಕ್ಕೆ ಹೊಂಚುಹಾಕಿ ಹಿಡಿದುಬಿಟ್ಟೆ.. ರಾಧೂ ಅತ್ತೆಯ ತಂಗಿಯ ಮಗಳು. ಹಿರೀಸಾವೆಯವಳು. ಪಿ.ಯು. ಮುಗಿಸಿ ಮುಂದೆ ಓದಲು ಇಲ್ಲಿ ಬೆಂಗಳೂರಿಗೆ ಬಂದಿದ್ದಾಳೆ.. ಇಂಗ್ಲಿಷ್ ಸಾಹಿತ್ಯ ಓದುವ ಅವಳಿಗೆ ಈ ಏರಿಯಾದಲ್ಲಿರುವ ಲೈಬ್ರರಿಯ ಪರಿಚಯ ಮಾಡಿಸಲಾಗುತ್ತಾ ಅಂತ ಕೇಳಿದಾಗ ನನಗೆ ಮುಂಜಾನೆದ್ದು ಕುಣಿವ ಕುಂಬಾರಣ್ಣನಷ್ಟು ಖುಷಿಯಾಯಿತು. ಕರೆದುಕೊಂಡು ಹೋದೆ. ಪ್ರತಿದಿನ ಅವಳ ಕಾಲೇಜು ಮುಗಿದು ಬಸ್ಸಿಳಿವಾಗ ಕಾದಿದ್ದು, ಜೊತೆಗೇ ಲೈಬ್ರರಿಗೆ ಹೋದೆ. ಹೆಚ್ಚು ಮಾತಿಲ್ಲದ ಅವಳು ನಗುತ್ತಾ ಜೊತೆಗೆ ಬರುವಾಗ ಮಳೆಯಲ್ಲಿ ನೆಂದು ಸುಳಿಗಾಳಿಗೆ ಅಲುಗಾಡುವ ಎಲೆಗಳಂತೆ ನಾನು..
ಹೀಗೇ ಮೆಲ್ಲಸರಿದ ದಿನಗಳ ಕೊನೆಗೊಂದು ಹೊಸವರ್ಷ, ಶುಭಕೋರಲು ಹೋದ ನನ್ನ ಕೈಯಲ್ಲಿ ಒಂದು ಪ್ರೇಮನಿವೇದನೆಯ ಗ್ರೀಟಿಂಗ್ ಕಾರ್ಡು, ಎರಡು ಕೆಂಗುಲಾಬಿ, ಒಂದು ಫ್ರೂಟ್ಸ್ ಎನ್ ನಟ್ಸ್ ಚಾಕೊಲೇಟಿತ್ತು. ಸಂಜೆ ಬಸ್ಸಿಳಿದವಳ ಜೊತೆಗೂಡಿದವನು, ಅಲ್ಲಿ ಲೈಬ್ರರಿಯ ತಿರುವಲ್ಲಿ ತಿರುಗುವ ಮುಂಚೆ - ಇವತ್ತು ಇನ್ನೊಂದ್ ಸ್ವಲ್ಪ ದೂರ ನಡೆದು ಹೋಗೋಣ ಅಲ್ಲೊಂದು ಚಂದ ಪಾರ್ಕಿದೆ ಅಂದೆ. ನಕ್ಕು ಜೊತೆಯಾದಳು.. ಅಲ್ಲಿ ಹೂವರಳಿ ಚೆಲುವು ಹೊದ್ದು ನಿಂತ ಪಾರ್ಕಿನ ಕಲ್ಲು ಬೆಂಚಲ್ಲಿ ಕೂರುವಾಗ ಧೈರ್ಯ ಮಾಡಿ ಗುಲಾಬಿ ಕೊಟ್ಟು ಹೊಸವರ್ಷದ ಶುಭಾಶಯ ಹೇಳಿದೆ. ಅವಳ ಮುಖದಲ್ಲಿ ಆಳ ಗುಳಿಯ ಸುಳಿನಗು. ಇನ್ನೇನು ಅದರಲ್ಲಿ ಬಿದ್ದು ಬಿಡಬೇಕು, ಸಾವರಿಸಿಕೊಂಡು ಕೂತೆ. ಅವಳು ತನ್ನ ಕಪ್ಪು ಬ್ಯಾಗಿನಿಂದ ಪುಟ್ಟದೊಂದು ಬಿಳಿಯ ಕಾಗದ ಹೊರತೆಗೆಯುತ್ತಿದ್ದಾಳೆ ಮಡಿಚಿಟ್ಟ ಅದರಲ್ಲೇನಿದೆ ಪ್ರೇಮನಿವೇದನೆಯೇ.. ಅರೆ ಹಳ್ಳಿಯ ಮುಗುದೆ ನಾನು ಬೆಂಗಳೂರಿನ ಫಾಸ್ಟ್ ಬೀಟ್ ಯಂಗ್ ಟರ್ಕ್ ಗಿಂತ ಚುರುಕಾಗಿದ್ದಾಳಲ್ಲಪ್ಪಾ.. ಅಂತ ಬೆರಗಾದೆ. ಕಾಗದ ಕೊಟ್ಟವಳು ಮೆಲ್ಲುಲಿದಳು ನನ್ನ ಮೊದಲ ಕವನ.. ನಿನಗೆ.. ಮತ್ತೆ ಗುಲಾಬಿಗಳ ಜೊತೆಗೆ ಆಟವಾಡುವ ಬೆರಳುಗಳು ಮಾತಿಲ್ಲ..
ಹೂವು ಗಿಡದಲ್ಲೇ ಚಂದ
ಕೀಳಲು ಸಲ್ಲ
ಪುಟ್ಟ ಕಿನ್ನರಿಯಾದರೆ ಒಂದು ಹೂಮುತ್ತೊತ್ತು
ಚಂದದ ಹುಡುಗಿಗೊಂದು ಮುಗುಳ್ನಗೆ ಸಾಕು
ಅಮ್ಮನ ತುರುಬಿಗೆ ತುಳಸಿಯೇ ಬೇಕು
ಅಕ್ಕನ ಜಡೆಗೆ ಕ್ಲಿಪ್ಪಿನ ತಳುಕು
ತಂಗಿಯ ಬಾಬ್'ಗೆ ಹೂವೇಕೆ ಬೇಕು,
ದೇವರಿಗೆ ಮಂತ್ರಪುಷ್ಪವಿರಿಸು
ಹೂವು ಗಿಡದಲ್ಲೇ ಚಂದ
ಕೀಳಲು ಸಲ್ಲ
ಇನ್ನೂ ಹೂವಾಡಗಿತ್ತಿಯಾದರೆ ಪರವಾಗಿಲ್ಲ
ಅದೇ ಅವಳ ಬದುಕು.
ಸುತ್ತ ಹೂಬಿರಿದ ಹೊಸವರುಷದ ಹೊಸಿಲಲ್ಲಿ
ನಿನಗೆ ನನ್ನ ಹೂನಗೆಯ ಆಶಯ.
ನೀನು ನನ್ನ ಮನಮೆಚ್ಚಿದ ಗೆಳೆಯ.
ಓದಿ ಮುಗಿಸಿದವ ಮಾತು ಮರೆತೆ. ಪ್ರೇಮನಿವೇದನೆಯ ಗ್ರೀಟಿಂಗ್ ಕಾರ್ಡ್ ಕೊಡಬೇಕೆನ್ನಿಸಲಿಲ್ಲ. ಇವಳೆನ್ನ ಒಲವ ದೇವತೆ ಹೌದು, ಒಲಿಸುವ ರಾಗ ಪೂಜೆ ಬೇರೆಯದೇ ಆಗಬೇಕು ಅಂದುಕೊಂಡೆ.
ಜೇಬಿನಿಂದ ಚಾಕಲೇಟ್ ತೆಗೆದು ಕೊಟ್ಟೆ. ನನಗೆ ಕೊಟ್ಟು ಅವಳೂ ತಿಂದಳು. ಕತ್ತಲಾಯಿತು ಮನೆಗೆ ಹೋಗಬೇಕೆಂದಳು. ಮನಸ್ಸಿಲ್ಲದ ಮನಸ್ಸಿನಿಂದ ಎದ್ದೆ. ಹೇಗೆ ಹೇಳುವುದು, ಹೇಳದೆ ಹೇಗಿರುವುದು ಗೊತ್ತಾಗದೆ ನಾಲ್ಕು ದಿನ ಒದ್ದಾಡಿದೆ. ಸಂಕ್ರಾಂತಿಯ ಎಳ್ಳು ಬೆಲ್ಲ ಬೀರಬಂದವಳ ಜೊತೆ ಲೈಬ್ರರಿಗೆ ಹೋಗೋಣವಾ ಅಂದರೆ ನಕ್ಕಳು - ಇವತ್ತು ರಜಾ.. ಸಿಟ್ಟು ಬಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡೆ. ಹೊರಗೆ ಬಂದರೆ ಅವಳು ಮನೆಗೆ ಹೋಗಿದ್ದಳು.
ಮರುದಿನ ಸಂಜೆ ಬಸ್ಸಿಳಿದವಳ ಜೊತೆಯಾದೆ, ಮಾತಿಲ್ಲ, ಇಬ್ಬರೂ ಲೈಬ್ರರಿಗೆ ಹೋಗದೆ ಪಾರ್ಕಿನ ಕಲ್ಲು ಬೆಂಚಲ್ಲಿ ಕೂತೆವು. ನಂಗೆ ನೀನಂದ್ರೆ ಇಷ್ಟ ಯಾವ ಮುನ್ಸೂಚನೆಯೂ ಇಲ್ಲದೆ ಬಾಯಿ ಮಾತಾಡಿಬಿಟ್ಟಿತು. ತಲೆ ಮೇಲೆತ್ತದೆ ಅವಳು ಹೇಳಿದಳು ನಂಗೆ ಗೊತ್ತದು.
ಸರಿ ನಿಂಗೆ..? ನನ್ನ ಮಾತಲ್ಲಿ ಆತಂಕ ಅಸಹನೆ ಎರಡೂ..
ತಗ್ಗಿಸಿದ ತಲೆಯಡಿಯಿಂದ ಮೆಲ್ಲ ಮಾತು - ನನಗೂ ನೀನಂದ್ರೆ ಇಷ್ಟವೇ.. ಆದರೆ ..
ಏನದು ಆದರೆ - ಈಗ ಅಸಹನೆ ಸ್ಪಷ್ಟವಾಗಿ ಒಡಮೂಡಿತ್ತು.
ಆದರೆ ಎಷ್ಟು ಇಷ್ಟ? ಬಾಳಿಡೀ ನಿನ್ನ ಜೊತೆಗೆ ಸಲ್ಲುತ್ತೇನಾ ನಾನು? ದಾರಿ ಸ್ಪಷ್ಟವಾಗಿಲ್ಲ. ಇನ್ನೂ ಓದಬೇಕಿದೆ. ಅಪ್ಪನಿಲ್ಲ ನನಗೆ. ಊರಲ್ಲಿ ಅಮ್ಮ ತಂಗಿ ತಮ್ಮ ಇದ್ದಾರೆ. ಅವರ ಜವಾಬ್ದಾರಿಯಿದೆ. ನೀನು ಸುಖವಾಗಿ ಪೇಟೆಯಲ್ಲಿ ಬೆಳೆದ ಹುಡುಗ, ಆರಾಮದ ಬದುಕು. ಹೀಗೇ ಮಾಡಬೇಕು ಎಂಬ ಜವಾಬ್ದಾರಿಯಿಲ್ಲ. ನಾನು ಕೆಲಸಕ್ಕೆ ಹೋಗಬೇಕು, ಮನೆ ನೋಡಬೇಕು ನಂತರ ಮದುವೆಯ ಮಾತು. ನನಗಿನ್ನೂ ಹದಿನೆಂಟು ವರ್ಷ, ನೀನು ಈಗ ಪದವಿಯ ಮೂರನೇವರ್ಷವನ್ನ ಎರಡನೇ ಸಲ ಕಟ್ಟಿದ್ದೀ...
-ಮಾತಾಡದೇ ಹೋದರೂ ನನ್ನ ಮುಖದಲ್ಲಿ ಸಿಟ್ಟು ಧುಮುಗುಡುತ್ತಿರುವುದು ನನಗೇ ಗೊತ್ತಾಗುತ್ತಿದೆ..
ಒಂದು ಕ್ಷಣ ಮೌನದ ನಂತರ ಮತ್ತೆ ಹೇಳಿದಳು - ಎಲ್ಲ ಸೌಕರ್ಯದ ಜೊತೆಗೆ ಬಂದರೆ ಮಾತ್ರ ನೀನು ಬೇಕಿದೆ ಅಂತಲ್ಲ ನಾನು ಹೇಳುವುದು. ನೀನೆಂದರೆ ಗೆಳೆಯನಾಗಿ ಇಷ್ಟವಾಗುತ್ತೀಯ. ಹಗುರ ಕ್ಷಣಗಳ ಉಲ್ಲಸದಲ್ಲಿ ನೀನು ಹಿತವಾದ ಜೊತೆ. ಆದರೆ ಕಷ್ಟದ ಕ್ಷಣಗಳ ಸಂಕಟವನ್ನ ಹಂಚಿಕೊಳ್ಳಲು ನೀನೆಷ್ಟು ಗಟ್ಟಿ ಇದ್ದೀಯ ನನಗೆ ಗೊತ್ತಿಲ್ಲ. ಒಂದು ಮಾತು ಹೀಗಲ್ಲ ಹಾಗೆ ಅಂದರೆ ಸಿಟ್ಟು ಮಾಡುತ್ತೀಯ. ನೀನು ಒಳ್ಳೆಯವನು, ನಗಿಸುತ್ತೀಯ, ನನಗೆ ಯಾವುದಾದರೂ ವಿಷಯ ಗೊತ್ತಿಲ್ಲದಾಗ ಗಲಿಬಿಲಿಯಾಗಿ ಬಿಸಿಯೇರಿದಾಗ ಮರದ ನೆಳಲಂತೆ ಜೊತೆಯಾಗುತ್ತೀಯ. ಆದರೆ
-ಆದ್ರೆ ಇನ್ನೇನೂ.. ಈಗ ಸಿಟ್ಟು ಹೋಗಿ ತಲ್ಲಣ ತುಂಬಿದೆ ನನ್ನ ಮಾತಲ್ಲಿ.. ಈ ಮಾಯಗಾತಿಗೆ ಏನು ಬೇಕು ಅಂತಲೇ ಗೊತ್ತಾಗುತ್ತಿಲ್ಲವಲ್ಲಪ್ಪಾ..
ಎಲ್ಲ ಸರಿ, ನೀನು ತುಂಬ ಚಿಕ್ಕವನು. ಇದೇ ತೀವ್ರತೆ, ಆಸಕ್ತಿ ಇನ್ನಾಲ್ಕು ವರ್ಷ ಆದ್ಮೇಲೆ ಇರುತ್ತಾ? ಈಗ ನಾನು ಜವಾಬ್ದಾರಿ ಬೆನ್ನೇರಿರದ ಬಿಡಿಸಿದ ರೆಕ್ಕೆಯ ಹಕ್ಕಿ. ಆಗ್ಲೇ ಹೇಳಿದಂಗೆ ಓದಿ ಮುಗಿದ ಮೇಲೆ ನಾನು ನೆಲದ ಮೇಲೆಯೇ ತೆವಳಬೇಕು. ನಿನ್ನ ವೇಗಕ್ಕೆ ಜೊತೆಯಾಗಲಾರೆ. ನಿಂಗೆ ಆಗ ಇನ್ನೇನೋ ಬೇಕು ಅನ್ನಿಸಿದ್ರೆ?
- ಅಯ್ಯೋ ಮಾರಾಯ್ತಿ ಅದೇನ್ ಯೋಚ್ನೆ ಮಾಡ್ತೀಯೇ ನೀನು.. ಇಷ್ಟೆಲ್ಲಾ ಸೀರಿಯಸ್ಸಾಗಿ ಮಹಿಳಾವಾದಿಯಂತೆ ಯೋಚ್ನೆ ಮಾಡಿದ್ರೆ ಅಷ್ಟೇ. ಲೈಫಲ್ಲಿ ಏನೂ ಮಾಡಕ್ಕಾಗಲ್ಲ.
ಅವಳಿಗೆ ಸಣ್ಣ ನಗು. - ಸರಿ ನಾನು ಮಹಿಳಾವಾದಿ ತರ ಯೋಚ್ನೆ ಮಾಡಲ್ಲ.. ಆದ್ರೆ ಇಬ್ರೂ ಒಂದು ಪರೀಕ್ಷೆ ಮಾಡೋಣ ಏನಂತೀಯಾ..
ಬೇಡ ಅನ್ನೋ ಪೆದ್ದಾ ಅಂತ ತಲೆಯೊಳಗಿನ ಗ್ರೇಸೆಲ್ಸ್ ಹೇಳ್ತಾ ಇದ್ರೆ, ಬಾಯಿ ತಾನೇ ತಾನಾಗಿ ಸರಿ ಕಣೇ ಅಂದ್ಬಿಡ್ಬೇಕಾ.
ಇನ್ನೆರಡು ವರ್ಷ ನನ್ ಡಿಗ್ರೀ ಮುಗಿಯೋವರೆಗೂ ನಾವಿಬ್ರೂ ಈ ವಿಷಯಾ ಮಾತಾಡ್ಬಾರ್ದು. ಇಲ್ಲಿಯವರೆಗಿನ ಹಾಗೆ ಹಕ್ಕಿಕ್ಷಣಗಳನ್ನ ಹೆಕ್ಕಿ ಫ್ರೆಂಡ್ಸ್ ಆಗಿ ಇರ್ಬೇಕು. ನನ್ ರಿಸಲ್ಟ್ ಬಂದ ದಿನ ಇಲ್ಲೇ ಮತ್ತೆ ಈ ವಿಷ್ಯಾನ ರೀಓಪನ್ ಮಾಡಾಣ. ಆಗ ಇಬ್ರಿಗೂ ಏನನ್ಸುತಿರತ್ತೆ ಅಂತ ನೋಡಿ ಮುಂದಿನ ವಿಷಯ ನಿಕ್ಕಿ ಮಾಡಾಣ. ಅಲ್ಲೀವರೆಗೂ ನೀನ್ ಈ ತರಾ ಮಾಡು ಹೀಗ್ ಬದುಕು, ಇದ್ ನಂಗೆ ಬೇಕು ಅಂತ ನಾನ್ ಹೇಳಲ್ಲ. ನೀನೂ ಹೇಳ್ಬಾರ್ದು.. ಏನಂತೀಯ.
ಹೂಂ ಅನ್ನೋಕ್ಕೆ ಮನ್ಸು ಬರ್ತಿಲ್ಲ.. ಆದ್ರೆ ತಲೆಯಲ್ಲಾಡಿಸಿದೆ.
ನಮ್ಮಿಬ್ರಲ್ಲಿ ಯಾವದೇ ತರ ಬದಲಾವಣೆ ಬಂದ್ರೂ ಇಬ್ರೂ ಬಂದಿದ್ದನ್ನ ಬಂದ ಹಾಗೇ ಒಪ್ಪಿಕೊಳ್ಳಬೇಕು, ಬೇಸರ ಮಾಡಿಕೊಳ್ಳೋಹಾಗಿಲ್ಲ ಆಯ್ತಾ?
ಆಯ್ತಮ್ಮಾ... ಇದ್ಯಾವುದೋ ಬಾಲಚಂದರ್ ಸಿನಿಮಾ ಡೈಲಾಗ್ ತರಾ ಇದೆ. ಆದ್ರೆ ಏನ್ಮಾಡೋದೂ ಒಪ್ಪಿಕೊಂಡಿದ್ದಾಯ್ತಲ್ಲ.. ನಡೀ ಕತ್ಲಾಗುತ್ತೆ ಇನ್ನು ಮನೆಗೆ ಹೋಗೋಣ ಅಂದೆ.
ಅವಳ ನಗುವೇ ಮಾತಾಡಿತು. ಎದ್ದು ಹೊರಟಳು.
ಮಾಮಾ ಶಶಿ ಬಿದ್ಬಿಟ್ಟಿದಾನೆ ಚುಕ್ಕಿ ಅಳುತ್ತಳುತ್ತ ಓಡೋಡಿ ಬಂದಳು.. ಓಡಿಕೊಂಡು ಹೋದೆವು. ಅಲ್ಲಿ ಪುಟಾಣಿ ಶಶಿ, ನಮ್ ಚುಕ್ಕಿಗಿಂತ ಒಂದ್ವರ್ಷ ದೊಡ್ಡವನಿರಬಹುದು ಜೋಕಾಲಿಯಲ್ಲಿ ನಿಂತುಕೊಂಡು ತೂಗುತ್ತಾ ಕಾಲ್ ಜಾರಿ ಬಿದ್ದುಬಿಟ್ಟಿದಾನೆ. ಹತ್ತಿರ ಹೋಗಿ ನೋಡಿದೆ. ಬಿದ್ದ ಶಾಕ್'ಗೆ ಭಯವಾಗಿ ಅಲುಗಾಡುತ್ತಲೂ ಇಲ್ಲ. ಕೆಳಗೆಲ್ಲ ಮರಳಿತ್ತು. ಬಹುಶಃ ಪೆಟ್ಟಾಗಿರಲಿಕ್ಕಿಲ್ಲ ಅನ್ನಿಸಿತು. ನಿಧಾನವಾಗಿ ಎಬ್ಬಿಸಿದೆ. ತೊಟ್ಟು ಮುರಿದ ಡೇರೆ ಹೂವೊಂದು ಬಾಡಿಕೊಂಡು ಕೂತ ಹಾಗೆ ಕೂತ್ಗೊಂಡ ಆ ಪುಟ್ಟ ಪೋರ. ನೋವಿನಿಂದ ಹಿಂಡಿದ ಮುಖ, ಕಣ್ಣಂಚಲ್ಲಿ ಒಂದೇ ಒಂದು ಪುಟ್ಟ ಹನಿ. ನಮ್ಮ ಪೋರಿಯನ್ನ ನೋಡಿದರೆ ಸದ್ದಿಲ್ಲದೆ ಅಳುತ್ತಿದ್ದಾಳೆ. ಏನೂ ಆಗಿಲ್ಲ ಚುಕ್ಕಿ, ಬಾ ಎತ್ಕೊಂಡು ಹೋಗಿ ಮನೆಗೆ ಬಿಡೋಣ. ಎಲ್ಲಿ ಶಶೀ ನಿಮ್ಮನೆ?
ಇಲ್ಲೇ ಪಾರ್ಕಿನ ಎದುರುಗಡೇನೇ ಮಾಮಾ ನಂಗೊತ್ತು, ಚುಕ್ಕಿ ದಾರಿ ತೋರುತ್ತಿದ್ದಾಳೆ. ಶಶಿಯನ್ನ ಮೆತ್ತಗೆ ಎರಡೂ ಕೈಯಲ್ಲೂ ಎತ್ತಿಕೊಂಡು ನೋವಾಗುತ್ತೇನೋ ಪುಟಾಣೀ ಅಂತ ಕೇಳಿದ್ರೆ, ಚೂರೇ ಚೂರು ಅಂಕಲ್ ಅಂತ ಹೇಳುತ್ತ ನಗಲು ಪ್ರಯತ್ನ ಪಟ್ಟರೆ ಆ ಕೆನ್ನೆಯಲ್ಲಿ ಒಂದು ಆಳ ಗುಳಿ.
ಹೋಗಿ ಅವನ ಮನೆಗೆ ಬಿಟ್ಟರೆ ಅಜ್ಜಿಯೊಬ್ಬರಿದ್ದರು. ಅಪ್ಪ-ಅಮ್ಮ ಸಾಫ್ಟಿಗಳಂತೆ ಬರುವುದು ರಾತ್ರಿ.
ಶಶಿಯನ್ನು ಬಿಟ್ಟು, ನಾನೂ ಚುಕ್ಕಿ ಮನೆಗೆ ಹೊರಟೆವು. ಸಂಜೆ ಮುಗಿದು ಕತ್ತಲಾಗಿತ್ತು. ಆಕಾಶದಲ್ಲೆಲ್ಲ ನೂರಾರು ಚುಕ್ಕಿಗಳು.
ಚಿಕ್ಕೆಯ ಮಿನುಗು ಅವಳ ಕಣ್ಮಿಂಚನ್ನೇ ನೆನಪಿಸುವುದು. ಒಂತರಾ ಹಿತವಾಗತ್ತೆ ಇನಿಶಿಯಲೀ.. ಆಮೇಲೆ ನೋವಿನ ಕೋಶದ ಪೊರೆ ಬಿಚ್ಚಿಕೊಳ್ಳುತ್ತದೆ. ಮೊದಲ ವರ್ಷದ ಪರೀಕ್ಷೆ ಮುಗಿದು ಅವಳು ಊರಿಗೆ ಹೋಗಿ ತಿಂಗಳು ಕಳೆದು ವಾಪಸ್ ಬರುವಷ್ಟರಲ್ಲಿ ನಾನು ಹಣ್ಣಾಗಿ ಹೋಗಿದ್ದೆ. ಕಾಲೇಜಿನ ಮೊದಲ ದಿನ ಮುಗಿಸಿ ಬಸ್ಸಿಳಿದು ಬಂದವಳು ಫ್ರೆಷ್ಷಾದ ಕಿನ್ನರಿಯಂತೆ ನಗುತ್ತ ಹೆಜ್ಜೆಯಿಟ್ಟರೆ ಮನಸ್ಸು ಅರಳತೊಡಗಿತು. ನಿನ್ ರಿಸಲ್ಟ್ ಬಂತಾ... ಅರಳಿದ್ದು ಅಲ್ಲೇ ತೊಟ್ಟುಕಳಚಿ ಬಿದ್ದಿತು.
ಈ ಸಲ ಎಲ್ಲ ಪಾಸಾಗಿದೆ, ಇಕನಾಮಿಕ್ಸ್ ಮಾತ್ರ ಇನ್ನೊಂದ್ಸಲ ಕಟ್ಬೇಕು.. ಹೇಳಿ ತಲೆತಗ್ಗಿಸಿದೆ.
ಏನೇನು ಓದಿದ್ಯೋ ರಜದಲ್ಲಿ? ಯಾವ್ ಹೊಸ ಬುಕ್ಕು.. ನಂಗಂತೂ ಲೈಬ್ರರಿ ಇಲ್ದೆ ಊರಲ್ಲಿ ಬೇಜಾರಾಗೋಗಿತ್ತು. ಆದ್ರೂ ಆಚೆ ಬೀದಿ ರಾಮಣ್ಣೋರ ಮನೇಲಿ ಒಂದಿಷ್ಟು ಒಳ್ಳೆ ಕನ್ನಡ ಪುಸ್ತಕಗಳು ಸಿಕ್ಕಿದ್ವು ಓದಿದೆ. ನೀನು?
ನಾನು...? ಏನ್ ಮಾಡಿದೆ ಅಂತಲೇ ನೆನಪಾಗ್ತಿಲ್ವಲ್ಲಾ? ಬೆಳಗ್ಗೆ ಲೇಟಾಗೆದ್ದು ಅದೂ ಇದೂ ಮ್ಯಾಗಝೀನ್, ಅಮ್ಮನಿಗೆ ಏನೋ ಸಹಾಯ, ಸಂಜೆ ಕ್ರಿಕೆಟ್, ರಾತ್ರಿ ಅವಳ ನೆನಪಿನಲ್ಲಿ ಕೈಯಲ್ಲಿ ಪುಸ್ತಕ ಹಿಡಿದು ಓದದೇ ಕನಸು ಕಾಣುತ್ತಾ ಬಿದ್ದುಕೊಂಡಿದ್ದೆ ಅಂದ್ರೆ ಏನಂದ್ಕೋತಾಳೋ.. ಬೇಡ ಏನಾದ್ರೂ ಚೆನಾಗಿರದು ಹೇಳ್ತೀನಿ.
ನಾನೂ ಬೆಳಗ್ಗೆ ಸ್ವಿಮ್ಮಿಂಗ್, ಆಮೇಲೆ ಒಂದಿಷ್ಟು ಒಳ್ಳೊಳ್ಳೆ ಕನ್ನಡ ಪುಸ್ತಕ, ಒಂದ್ ನಾಲ್ಕಾರು ಇಂಗ್ಲಿಷ್ ಬುಕ್ಸ್ ಓದಿದೆ.. ಯಾವ್ಯಾವ್ದು ಓದಿದೆ ನೀನು?
ಖಾಂಡೇಕರ್ ಅವರ ಅಶ್ರು, ಶಾಂತಿನಾಥ ದೇಸಾಯಿಯವರ ಮುಕ್ತಿ, ಗಳಗನಾಥರ ಮಾಧವ ಕರುಣಾವಿಲಾಸ, ಮಾಸ್ತಿಯವರ ಚಿಕವೀರ ರಾಜೇಂದ್ರ, ಆಮೇಲೆ ನಾಗ್ತಿಹಳ್ಳಿಯವ್ರ ಚುಕ್ಕಿ ಚಂದ್ರಮರ ನಾಡಿನಲ್ಲಿ.. ಇದಿಷ್ಟೇ ಅಲ್ಲ ಕಣೋ ವುದರಿಂಗ್ ಹೈಟ್ಸ್ ಮತ್ತೆ ಟೆಸ್ ಇನ್ನೊಂದ್ಸಲ ಓದಿದೆ.. ಆಮೇಲೆ ಈ ಸಲ ಒಬ್ರು ಮನೇಲಿ ನಂಗೆ ಒಂದ್ನಾಲ್ಕು ಅಗಾಥ ಕ್ರಿಸ್ಟಿ ಬುಕ್ಸ್ ಸಿಗ್ತು. ಸಕ್ಕತ್ತಾಗಿದೆ. ಹಿಡಿದಿದ್ದು ಬಿಡದೆ ಕೂತು ಓದಿದೆ. ಏನ್ ಬರೀತಾಳೆ ಅವ್ಳು ಗೊತ್ತಾ. ಅದೆಲ್ಲಾ ಹೋಗ್ಲಿ ನೀನು ಅಶ್ರು ಓದಿದೀಯಾ?
ನಂಗೆ ಕಣ್ಣು ತುಂಬಿಕೊಳ್ಳುವಂತಾಗಿತ್ತು.. ಹ್ಯಾಗೋ ಸಾವರಿಸಿಕೊಂಡು ಇಲ್ಲ ಕಣೇ..ಯಾರು ಬರ್ದಿದ್ದು ಅದು? ಕೇಳಿದೆ.
ನಂಗೊತ್ತಿತ್ತು ನೀನು ಓದಿರಲ್ಲ ಅಂತ. ಅದಿಕ್ಕೇ ಮಾವ ಮೈಸೂರಿಗೆ ಹೋಗಿದ್ದಾಗ ಕೇಳಿ ತರಿಸಿಕೊಂಡೆ ಅವರ ಹತ್ರ. ನಿಂಗೇಂತನೇ. ಓದ್ಲೇಬೇಕು ನೀನು. ಕೈಗೆ ಚಂದಕ್ಕೆ ಬೈಂಡ್ ಮಾಡಿದ ಪುಸ್ತಕ ಕೊಟ್ಟಳು.. ಓಹೋ.. ಇನ್ನೆರಡು ದಿನದಲ್ಲಿ ವಿಮರ್ಶೆ ಹೇಳ್ದೇ ಇದ್ರೆ ಕೇಳು..ಅಂತ ನಗುತ್ತ ತಗೊಂಡೆ.
ಸಂಜೆ ಮೆಲ್ಲಗೆ ಹೆಜ್ಜೆಯಿಟ್ಟು ರಾತ್ರಿಯ ಬೀದಿಗೆ ತಿರುಗಿದ್ದಳು. ನಾವು ಮನೆ ಕಡೆ ಹೊರಟೆವು. ರಾಧೂ ಅತ್ತೆಯ ಮನೆಯ ಕಂಪೌಂಡಲ್ಲೊಂದು ಪಾರಿಜಾತದ ಮರವಿತ್ತು. ಮರದ ತುಂಬ ಬಾಗಿನಿಂತ ಹೂಗಳು. ಗೇಟು ತೆಗೆಯುವ ಮುನ್ನ ನನ್ನ ನೋಡಿ ನಕ್ಕವಳ ಕಣ್ಣ ಮಿಂಚಿಗೆ ಸುಸ್ತಾಗಿ ಕಾಲೆಳೆದುಕೊಂಡು ಮನೆಗೆ ಬಂದೆ. ಅಮ್ಮ ಮೆಂತ್ಯ ಗೊಜ್ಜು ಮಾಡಿದ್ದರು. ಗಡದ್ದಾಗಿ ಹೊಡೆದು ಮಂಚವೇರಿ ಕೈಯಲ್ಲಿ ಪುಸ್ತಕ ಹಿಡಿದರೆ ಕಣ್ಣು ಎಳೆದುಕೊಂಡು ಹೋಗುತ್ತಿತ್ತು. ನಾಳೆ ಇಡೀ ಕೂತು ಓದಿ ಮುಗಿಸಿದರಾಯಿತು ಅಂತ ಪಕ್ಕಕ್ಕಿಟ್ಟೆ.
ಹಾಗೇ ಮುಂದರಿದ ದಿನಗಳ ಕೊನೆಗೆ ಸಪ್ಲಿಮೆಂಟರಿ ಪರೀಕ್ಷೆ ಬಂದಿದ್ದೆ ಗೊತ್ತಾಗಲಿಲ್ಲ. ಹ್ಯಾಗೋ ಗಡಿಬಿಡಿಯಲ್ಲಿ ಹೋಗಿ ಬರೆದು ಬಂದವನು ರಿಸಲ್ಟಿಗೆ ಕಾಯದೇ ಹಾಯಾಗಿ ಓಡಾಡಿಕೊಂಡಿದ್ದೆ.
ಇವಳು ಚಂದದ ಹುಡುಗಿ,ಕುಡುಮಿ ಕುಡುಮಿ ಎಲ್ಲ ಬರವಣಿಗೆ, ಪ್ರಬಂಧ, ಕತೆ ಕವಿತೆಗಳಲ್ಲಿ ಬಹುಮಾನ ಗಿಟ್ಟಿಸುತ್ತಾ, ಅದ್ಯಾವುದೋ ಫೆಲೋಶಿಪ್ ಸ್ಕಾಲರ್ ಶಿಪ್ ಎಲ್ಲ ಪಡೆಯುತ್ತಾ ನಮ್ಮ ಸಂಜೆಗಳಲ್ಲಿ ಮೌನಸಲ್ಲಾಪ ತುಂಬಿತು. ಅವಳು ಯಾವ ಪುಸ್ತಕದ ಹೆಸರು ಹೇಳಿದರೂ ನನಗೆ ರೇಗುತ್ತಿತ್ತು. ಒಂದೆರಡು ಸಲ ಬಯ್ಯಿಸಿಕೊಂಡವಳು ಪುಸ್ತಕದ ಬಗ್ಗೆ ಮಾತಾಡುವುದನ್ನೆ ಬಿಟ್ಟಳು. ಬೇರೆ ಮಾತು ಅವಳಿಗೆ ಗೊತ್ತಿರಲಿಲ್ಲ. ನನಗೆ ಮಾತಾಡಲು ಹೊಸದೇನಿರಲಿಲ್ಲ. ಮೊದಲ ಪುಟವನ್ನೂ ತಿರುಗಿಸದ ಅಶ್ರು ನನ್ನ ಮಂಚದ ಪಕ್ಕದ ಸ್ಟೂಲಿನ ಮೇಲೆ ಮಕಾಡೆ ಬಿದ್ದುಕೊಂಡಿತ್ತು.
ಇವತ್ತು ಸಂಜೆ ಎಷ್ಟು ಕಾದರೂ ಅವಳು ಬರಲಿಲ್ಲ. ಐದೂವರೆಗೆ ಸಿಟ್ಟಿನಿಂದ ಶುರುವಾದ ಅಭಿಮಾನ, ಎಂಟು ಗಂಟೆಯ ಹೊತ್ತಿಗೆ ಆತಂಕದ ದೈನೇಸಿತನಕ್ಕೆ ತಿರುಗಿತ್ತು. ರಾಧೂ ಅತ್ತೆಯ ಮನೆಗೇ ಹೋದೆ. ನುಚ್ಚಿನುಂಡೆ, ಕಾಫಿ ಕೊಟ್ಟ ಅತ್ತೆ, ಅವಳ ಬಗ್ಗೆ ಹೇಳಿದರು. ಇವತ್ತು ಸೆಂಟ್ರಲ್ ಕಾಲೇಜಿಗೆ ಹೋಗ್ಲಿಲ್ಲ ಯಾಕೆ ನೀನೂ? ಅತ್ತೆ ಕೇಳಿದರೆ ನಾನು ಬೆಪ್ಪನಂತೆ ಯಾಕೆ ಅಂದ್ ಬಿಟ್ಟೆ. ಓ ನಿಂಗೊತ್ತಿಲ್ವಾ, ಇವತ್ತು ಅವಳ ಕತೆಗೆ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಬಂದ ಮೊದಲ ಬಹುಮಾನ ಕೊಡ್ತಾರಲ್ಲಾ, ನೀನೂ ಹೋಗಿರ್ತೀ ಮಾರ್ಗದರ್ಶಕ ಅಂದ್ಕೊಂಡಿದ್ದೆ ಅತ್ತೆ ಪುಟ್ಟಗೆ ನಗಾಡಿದರು. ನುಣ್ಣಗಿದ್ದರೂ ನುಚ್ಚಿನುಂಡೆಯಲ್ಲಿ ದೊಡ್ಡ ನುಚ್ಚು ಸಿಕ್ಕಿ, ನೆತ್ತಿ ಹತ್ತಿತು. ಅತ್ತೆ ಕೊಟ್ಟ ನೀರು ಕುಡಿದು ಸಾವರಿಸಿಕೊಂಡು ಅಲ್ಲಿಂದ ಹೊರಟು ಬಂದೆ.
ಮನೆಯಲ್ಲಿ ಅಪ್ಪ ಅದ್ಯಾವುದೋ ಎನ್.ಐ.ಐ.ಟಿಯಂತೆ ಅದರ ಫ್ರಾಂಚೈಸಿ ತಗೊಳೋಣ ಅಂತ ಮಾತು ಶುರುಮಾಡಿದರು. ನಾನು ಸುಮ್ಮನಿದ್ದೆ. ಹೀಗೇ ಇದ್ದರೆ ಕೆಲಸವಿಲ್ಲದೆ, ಆದಾಯವಿಲ್ಲದೆ ಯಾರೂ ಮದುವೆಯಾಗೋಲ್ಲ.. ಅಮ್ಮನ ಕಳಕಳಿ.
ಪರ್ವಾಗಿಲ್ಲ. ನಾನೇನೂ ಮದ್ವೆಯಾಗೋದಕ್ಕಾಗಿ ಕೆಲ್ಸ ಹಿಡೀಬೇಕಾಗಿಲ್ಲ.. ನನ್ನ ಉತ್ತರವನ್ನ ತುಂಡರಿಸುತ್ತಾ ಅಪ್ಪ ಹೇಳಿದ್ರು. ಇರಬಹುದೋ ಆದರೆ ಅದು ಈಗ ವಯಸ್ಸಿರುವಾಗ ಹೇಳುವ ಮಾತು.. ಕತೆ ಕವಿತೆ ಬರೆಯೋವ್ರೂ ಕೂಡ ಪ್ರಾಕ್ಟಿಕಲ್ ಆಗಿ ಇರ್ತಾರಪಾ.. ಅಪ್ಪನ ಮೀಸೆಯಂಚಲ್ಲಿ ನಗುವಿರಬಹುದೇ ನನ್ನ ಮೈಯೆಲ್ಲ ಉರಿಯಿತು. ಸಿಟ್ಟಿನಿಂದ ಹೊರಗೆ ಬಂದೆ. ಅವಳು ಬಾಗಿಲಲ್ಲಿ ನಿಂತಿದ್ದಳು ಕೈಯಲ್ಲೊಂದು ಟ್ರೋಫಿ ಮುಖದಲ್ಲಿ ಅದನ್ನ ಮೀರಿ ಹೊಳೆಯುತ್ತಿರುವ ನಗು, ಆತ್ಮವಿಶ್ವಾಸ.. ನೋಡೋ ಅಂತ ಹೇಳಬಂದವಳ ಕೈ ಕಿತ್ತೊಗೆದು ನಿನ್ ಬಹುಮಾನ ನೀನೇ ಇಟ್ಕೋ ನಂಗ್ಯಾಕೆ.. ಚಪ್ಪಲಿ ಸಿಕ್ಕಿಸಿ ಸರಸರನೆ ಹೊರಟು ಹೋದೆ. ಬಾಗಿಲಿಗೆ ಬಂದಿದ್ದ ಅಮ್ಮ ಅವಳನ್ನ ಕರೆದುಕೊಂಡು ಒಳಗೆ ಹೋಗಿದ್ದು ಕಣ್ಣಂಚಿನಲ್ಲಿ ಕಾಣುತ್ತಿತ್ತು.
ಆಮೇಲೆ ತುಂಬ ದಿನ ಹಾಗೇ ಇದ್ದೆ. ಒಂದಿನ ಅಪ್ಪ ಕರ್ದು ನೋಡೋ ಎಲ್ಲ ಫಾರ್ಮಾಲಿಟೀಸ್ ಮುಗ್ಸಿದೀನಿ. ಆಫೀಸಲ್ಲಿ ಕೂತು ನೋಡಕ್ಕೆ ಅಂತ ಒಬ್ರು ಬೇಕು. ಬೇರೇವ್ರನ್ನ ಹುಡುಕೋವರ್ಗೂ ಸ್ವಲ್ಪ ಕೂರ್ತೀಯ ನೀನೆ? ಹುಂ ನೋಡೋಣ ಅಂತ ಅವತ್ತು ಆಫೀಸಿನ ಮೆಟ್ಟಲು ಹತ್ತಿದವನು ಆಮೇಲೆ ತಿರುಗಿ ನೋಡಲಿಲ್ಲ. ಅವಳ ರಿಸಲ್ಟಿನ ದಿನ ಗೊತ್ತಿಲ್ಲದೆಯೇ ಸರಿದು ಹೋಗಿ..ಈಗ ಮಾಸ್ಟರ್ ಡಿಗ್ರೀ ಮುಗಿದಿದೆ.. ನನ್ನ ಸಪ್ಲಿ ಪೇಪರ್ ಇನ್ನೂ ಹಾಗೇ ಉಳಕೊಂಡಿದೆ. ನನ್ನ ಕೈಕೆಳಗೆ ಕೆಲಸ ಮಾಡುವ ಕ್ವಾಲಿಫೈಡ್ ಎಂಬಿಎಗಳು.. ಅವಳು ಹುಡುಗಿಯರ ಕಾಲೇಜಿನಲ್ಲಿ ಪೊಯೆಟ್ರಿ ಲೆಕ್ಚರರ್!
ನಾಲ್ಕು ವರ್ಷಗಳ ನಂತರ ಅವಳಮ್ಮ, ರಾಧೂ ಅತ್ತೆ ನಮ್ಮನೆಗೆ ಜಾತಕ ತಗೊಂಡು ಬಂದರು. ನಾನು ನೇರವಾಗಿ ಇಷ್ಟವಿಲ್ಲ ಅಂದುಬಿಟ್ಟೆ.
ಅಷ್ಟೆಲ್ಲ ವರ್ಷಗಳ ನಂತರ ಮಾರನೆಯ ದಿನ ಸಂಜೆ ಮನಸ್ಸು ತಡೆಯಲಿಲ್ಲ. ಲೈಬ್ರರಿಯ ಕಡೆ ಹೊರಟೆ. ಹಾಗೇ ಮುಂದರಿದು ಪಾರ್ಕಿಗೆ ಹೋದರೆ ಅವಳು ಅಲ್ಲೇ ಕೂತು ಕಾಯುತ್ತಿದ್ದಳು. ಗುಡ್ಡದ ಮೇಲಿನ ಪಾರ್ಕದು. ಅವಳ ಬೆನ್ನ ಹಿಂದೆ ನಂಗೊತ್ತಿತ್ತು ನೀನು ಬಂದೇ ಬರ್ತೀಯಾಂತ ಸೂರ್ಯ ಕೆಂಪುಕೆಂಪಾಗಿ ನೋಡುತ್ತಿದ್ದ. ಹತ್ತಿರ ಹೋದ ಕೂಡಲೆ ಎದ್ದವಳು ಕೈಗೆ ಫ್ರೂಟ್ಸ್ ಎನ್ ನಟ್ಸ್ ಚಾಕಲೇಟಿತ್ತು ನಸುನಕ್ಕಳು. ಆ ಮಿಂಚು ಸೋಕಿ ನಾನು ನಿಲ್ಲಲಾರದೆ ಕೂತೆ. ಥ್ಯಾಂಕ್ಸ್ ಕಣೋ ನೀನೆಲ್ಲಿ ಹೂಂ ಅಂದ್ ಬಿಡ್ತೀಯೋ ಅಂತ ಭಯವಾಗ್ ಬಿಟ್ಟಿತ್ತು. ರಾಧೂ ಅತ್ತೆ ಮೊದ್ಲು ಈ ಪ್ರಸ್ತಾಪ ಇಟ್ಟಾಗ ನಂಗೆ ಬೇಡ ಅಂತ ಹೇಳೋದು ಹ್ಯಾಗೆ ಗೊತ್ತಾಗಿಲ್ಲ. ಮೇಲಾಗಿ ಅಮ್ಮಂಗೆ ನಾನು ಮದ್ವೆ ಆಗ್ಲೇ ಬೇಕು ಅಂತ. ಈಗ ಎಲ್ಲ ನಿರಾಳ.
ನಾನು ಮಾತಿಲ್ಲದೆ ಅವಳನ್ನು ನೋಡಿದೆ. ಮಾತಾಡಲು ಬಾಯಿ ಬರುತ್ತಿಲ್ಲ. ಅಷ್ಟು ವರ್ಷಗಳ ಹಿಂದಿನ ಅದೇ ಮನಸು ಬೈದುಕೊಂಡಿತು. ನಿನ್ನೆ ಮುಚ್ಕೊಂಡು ಹೂಂ ಅಂದಿದ್ರೆ ಏನಾಗ್ತಾ ಇತ್ತು ನಿಂಗೆ. ಈಗ ಅನುಭವ್ಸು...
ನಂಗೆ ಕೇಂಬ್ರಿಡ್ಜ್ ದು ಒಂದು ಸ್ಕಾಲರ್ ಶಿಪ್ ಸಿಕ್ಕಿದೆ. ಎರಡು ವರ್ಷ ಫೆಲೋಶಿಪ್. ಹೋಗ್ಬೇಕೂಂತ. ಮನೇಲಿ ಮದ್ವೆ ಅಂತ ಗಲಾಟೆ ಮಾದ್ತಾ ಇದ್ದರು. ಈಗ ನೆಮ್ಮದಿ. ವಾಪಸ್ ಬಂದ್ ಮೇಲೆ ಹಣೇಲಿ ಏನ್ ಬರೆದಿದೆ ನೋಡೋಣ ಅಲ್ವಾ...
ನಾನು ಹೌದೌದು ಅಂತ ಪೆದ್ದು ಪೆದ್ದಾಗಿ ನಕ್ಕೆ.
ಕತ್ತಲಾಯಿತು ಅಂತ ಎದ್ದವಳು ಬೆಟ್ಟದ ಪಾರ್ಕಿನ ಕೊನೆಯ ಮೆಟ್ಟಿಲಿಳಿವಾಗ ಹೇಳಿದಳು.
- ಆದ್ರೆ ನಿಂಗೇನು ಫಾರಿನ್ ರಿಟರ್ನ್ಡ್ ಹೆಂಡ್ತಿ ಅಂತ ಬೇಜಾರಿಲ್ವಲ್ಲಾ?
ನಾನು ಮೈ ಚೂಟಿಕೊಂಡೆ.. ಅವಳು ಮಿಂಚು ಮಿಂಚು ನಗುವಿನ ಗೊಂಚಲಾಗಿ ಮುಂದೆ ಓಡುತ್ತ ಹೋದಳು.. ನಾನು ಅಲ್ಲಿ ದೀಪದ ಕಂಬದ ಕೆಳಗಿನ ಕತ್ತಲಲ್ಲಿ ಒಳಗೆಲ್ಲ ಮಿಂಚು ತೋಯ್ದು ನಿಂತೆ.
ಎರಡು ವರ್ಷ ಕಳೆಯಲು ಇನ್ನೂ ಮೂರು ತಿಂಗಳಿತ್ತು.
ಅಪ್ಪ ಬೋರ್ಡ್ ಮೀಟಿಂಗಿನಲ್ಲಿದ್ದವನನ್ನ ಅರ್ಜೆಂಟಾಗಿ ಬಂದು ಕರೆದರು.
ಅವರು ಹೇಳಿದ ಏನೇನೋ ಮಾತುಗಳಲ್ಲಿ ನನಗೆ ಕೇಳಿಸಿದ್ದು ಇಷ್ಟು..
ಎತ್ನಿಸಿಟಿ ಸ್ಟಡಿ ಅಂತ ಆಫ್ಘಾನಿಸ್ತಾನದಲ್ಲಿದ್ದ ಅವಳನ್ನ ಮತ್ತು ಇನ್ನೆರಡು ವಿದ್ಯಾರ್ಥಿಗಳನ್ನ, ಅಲ್ಲಿನ ಉಗ್ರಗಾಮಿ ಗುಂಪು
ಸೆರೆಹಿಡಿದು..
ಮುಂದೆ ಕೇಳಲಾಗದೆ ಎಚ್ಚರ ತಪ್ಪಿದವನು ಎದ್ದಾಗ ಮನೆಯಲ್ಲಿ ಸೂತಕ.
ಅಪ್ಪ ಡೆಲ್ಲಿಗೆ ಹೋಗಲು ರೆಡಿಯಾಗುತ್ತಿದ್ದರು.
ಮಿಂಚನ್ನ ಅದಕ್ಕಿಂತ ತೀವ್ರದ ಇನ್ಯಾವುದೋ ಒಂದು ಕಬಳಿಸಿ ಕಪ್ಪು ಪೆಟ್ಟಿಗೆಯಲ್ಲಿ ಕೂಡಿ ಮೊಳೆ ಹೊಡೆದು ಕಳಿಸಿದ್ದರು.
ಅವರು ಪೆಟ್ಟಿಗೆ ತೆರೆದಾಗ ನಾನು ಬೆಟ್ಟದ ಮೇಲಿನ ಪಾರ್ಕಲ್ಲಿ ಕೂತಿದ್ದೆ.
ಅವಳು ಮುಳುಗುವ ಸೂರ್ಯನ ಕೆಂಪು ಬಣ್ಣದಲ್ಲಿ, ಅವನ ಹಿಂದೆ ಹರಡಿಕೊಂಡಿದ್ದ ನೀಲಿಯಲ್ಲಿ, ದೀಪದ ಕಂಬದ ಕೆಳಗಿನ ಕತ್ತಲೆಯಲ್ಲಿ.. ಮೇಲೆ ಮಿನುಗುವ ಚುಕ್ಕಿಯಲ್ಲಿ...
ಚುಕ್ಕಿ ಕೈ ಹಿಡಿದು ಮಾಮಾ ಮನೆಬಂತು ಗೇಟ್ ತೆಗಿ ಅಂತ ಕೈ ಹಿಡಿದೆಳೆಯುತ್ತಿದ್ದಳು.
Monday, December 3, 2007
Subscribe to:
Post Comments (Atom)
5 comments:
Sindhu Super, Aadre yake tragedy ending maadide? Papa Minchu
ಸಿಂಧು ಅಕ್ಕಾ,
ತುಂಬಾ ಚನ್ನಾಗಿ ಇದ್ದು ಸ್ಟೊರಿ. ಟ್ರಾಜಡಿ ಎಂಡಿಂಗ್ ಬ್ಯಾಡಿತ್ತು.
ಅವರಿಬ್ಬರು ಒಳ್ಳೆ ಜೋಡಿ ಆಗದಿದ್ದರು, ಅವರಿಬ್ಬರ ಮದ್ಯೆ ಒಂದು ಮಧುರ ಸ್ನೇಹವನ್ನಾ ಇಡಲಾಗಿತ್ತು. ಯಾಕೋ ಟ್ರಾಜಡಿ ಎಂಡಿಗ್ ನೋವಾಕ್ತು.
ಹಂದರದ ಬಗ್ಗೆ ಮಾತಿಲ್ಲ, ಎಂದಿನಂತೆ. But ending was unexpected and shocking! ನೈಜ ಘಟನೆಯ ಎಳೆ ಹಿಡಿದು ಹೆಣೆದ ಕಥೆಯಾ ಮತ್ತೆ?
ಅನು,ರಂಜು ಮತ್ತು ಸುಶ್ರುತ
ಥ್ಯಾಂಕ್ಸ್,
ಕಥೆ ಕೇಳಿದ್ದೇ ಅದನ್ನ. ಹಾಗೇ ಬರೆದೆ.
ಅವರಿಬ್ಬರೂ ಮೊದಲ ಬಾರಿ ಇಷ್ಟ ಪಟ್ಟಾಗಿನಕಿಂತ ತುಂಬ ಬೇರೆ ರೀತಿಯಾಗಿ ಬೆಳೆದಿದ್ದರು. ಆದರೆ ಇಬ್ಬರಿಗೂ ಅದನ್ನ ಒಪ್ಪಿಕೊಳ್ಳಲು, ಅವತ್ಯಾವತ್ತೋ ಸಂಜೆಯಲ್ಲಿ ಮಾತಾಡಿಕೊಂಡ ಬಾಲಚಂದರ್ ಸಿನಿಮಾದ ಕಂಡಿಶನ್ಸ್ ಮುರಿಯಲು ಹಿಂಜರಿಕೆ.
ಅವತ್ತು ಫ್ರೆಶ್ಯಾಗಿ ಹಳ್ಳಿಯಿಂದ ಬಂದ ಹುಡುಗಿಗೂ ಇವತ್ತು ಪ್ರೌಢವಾಗಿ ಯೋಚನೆ ಮಾಡಬಲ್ಲ ಸ್ವತಂತ್ರ ಹೆಣ್ಣಾಗಿ ನಿಂತವಳಿಗೂ ತುಂಬ ವ್ಯತ್ಯಾಸ.
ಅವಳ ಸಂಜೆಗಳಿಗೆ ಜೊತೆಯಾಗಲು ಲೈಬ್ರರಿಗೆ ಬಂದವನಿಗೆ ಅವಳಿಗೆ ದಾರಿ ತೋರುತ್ತಿರುವೆನೆಂಬ ಹುಸಿನಂಬಿಕೆಯಿರುವವರೆಗೂ ಇದ್ದ ವಿಶ್ವಾಸ ಆಮೇಲೆ ಹೋಗಿಬಿಡುವುದು ಅಲ್ಲಲ್ಲಿ ತೋರಿದ್ದೇನೆ.
ಅವಳನ್ನು ಕೊಲ್ಲಬಾರದಿತ್ತು..! ಹುಂ ಏನು ಮಾಡಲಿ ಉಗ್ರಗಾಮಿಗಳು ಏನು ಮಾಡುತ್ತಾರೆ ಎಂದು ಹೇಗೆ ಹೇಳುವುದು?!
ಆಮೇಲೆ.. ಅನ್ ಎಕ್ಸ್ ಪೆಕ್ಟೆಡ್ ಮತ್ತು ಶಾಕಿಂಗ್..ಬಗ್ಗೆ..ಹೂಂ ನಂಗೂ ಅದು ಅನ್ ಎಕ್ಸ್ ಪೆಕ್ಟೆಡ್ಡೇ..!
ಯಾವ ಕತೆಯಲ್ಲಿ ನೈಜ ಘಟನೆಯ ಎಳೆ ಇರುವುದಿಲ್ಲ? ಯಾವ ನಿಜಘಟನೆಯಲ್ಲಿ ಕತೆಯ ಹಂದರವಿರುವುದಿಲ್ಲ? ಹೇಳಲು ಕಷ್ಟ.
ಪ್ರೀತಿಯಿಂದ
ಸಿಂಧು
ಸಿಂಧು...
ಆಕಸ್ಮಿಕ ತಿರುವಿನಿಂದ ಆಘಾತವಾಯಿತಾದರೂ ಮನದಲ್ಲೇ ಮನೆಮಾಡುವ ಕಥೆ.
Post a Comment